ಸಿಲೆಬ್ರಿಟಿಗಾಗಿ ನಿನ್ನೆ ಗಂಧದ ಗುಡಿ (Gandhad Gudi) ಸ್ಪೆಷಲ್ ಶೋ ಆಯೋಜನೆ ಮಾಡಲಾಗಿತ್ತು. ಕನ್ನಡದ ಬಹುತೇಕ ನಟ, ನಟಿಯರು ಹಾಗೂ ತಂತ್ರಜ್ಞರ ಜೊತೆ ಲೇಖಕಿ, ಇನ್ಫೋಸಿಸ್ (Infosys) ನ ಸುಧಾಮೂರ್ತಿ ಕೂಡ ಆಗಮಿಸಿದ್ದರು. ಸಿನಿಮಾ ನೋಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಬಂದಿರುವುದು ನೋಡಿ ಗರ್ವ ಬಂತು. ಅವರ ಈ ಪ್ರಯತ್ನಕ್ಕೆ ಫುಲ್ ಮಾರ್ಕ್ಸ್ ಕೊಡುತ್ತೇನೆ’ ಎಂದು ಹೆಮ್ಮೆಯಿಂದ ಮಾತನಾಡಿದರು.
ಈ ಗಂಧದ ಗುಡಿಯಲ್ಲಿ ಯುವಕರು ನೋಡಿ ತಿಳಿದುಕೊಳ್ಳಬಹುದಾದ ಸಾಕಷ್ಟು ವಿಷಯಗಳು ಇವೆ. ಅದರಲ್ಲೂ ನನ್ನ ಉತ್ತರ ಕರ್ನಾಟಕದ ಬಗ್ಗೆ ತೋರಿಸಿದಾಗ ಮತ್ತು ಪುನೀತ್ (Puneeth Rajkumar) ಅವರು ಉತ್ತರ ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತನಾಡಿದಾಗ ನಾನೂ ಭಾವುಕಳಾದೆ. ನಮ್ಮ ನೆಲದ ಚಿತ್ರ ಇದಾಗಿದ್ದರಿಂದ ಹೆಚ್ಚು ಆಪ್ತತೆ ಅನಿಸಿತು ಎಂದು ಸುಧಾಮೂರ್ತಿ (Sudhamurthy) ಮಾತನಾಡಿದರು. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ
ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.
ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ.