ಚಿಕ್ಕಬಳ್ಳಾಪುರ: ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯಲ್ಲಿ (Ayodhya) ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ನನಗೆ ಅಹ್ವಾನ ಬಂದಿದೆ, ಆದರೆ ಹೋಗಲಾಗುತ್ತಿಲ್ಲ. ಇದು ದುರದೃಷ್ಟಕರ ಎಂದು ಈಶಾ ಸಂಸ್ಥಾಪಕ ಜಗ್ಗಿ ವಾಸುದೇವ್ (Sadhguru Jaggi Vasudev) ಹೇಳಿದರು.
ಸಂಕ್ರಾಂತಿ ಹಬ್ಬದ ಅಂಗವಾಗಿ ಚಿಕ್ಕಬಳ್ಳಾಪುರದ ಈಶಾ ಆದಿಯೋಗಿ (Esha Foundation Chikkaballapur) ಕೇಂದ್ರದಲ್ಲಿ ನಂದಿ ವಿಗ್ರಹ ಹಾಗೂ ತ್ರಿಶೂಲ ಪ್ರತಿಷ್ಠಾಪನಾ ಕಾರ್ಯಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ನನಗೆ ಈಗಾಗಲೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪೂರ್ವ ನಿಗದಿ ಕಾರ್ಯಕ್ರಮ ಇರುವ ಕಾರಣದಿಂದ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲಾಗುತ್ತಿಲ್ಲ. ಇದು ನನ್ನ ದುರದೃಷ್ಟ, ನಾನು ಹೋಗಲಾಗುತ್ತಿಲ್ಲ ಅಂತ ಸ್ಪಷ್ಟಪಡಿಸಿದರು.
ಇದೇ ವೇಳೆ ಅಪೂರ್ಣ ಮಂದಿರ ಉದ್ಘಾಟನೆ ಅಂತಾ ಕೆಲ ಮಠಾಧೀಶರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಸದ್ಗುರು, ನಮಗೆ ಯಾರ ಮೇಲಾದರೂ ಬಹಳ ಪ್ರೀತಿ ಇದ್ರೆ ಎಷ್ಟು ಮಾಡಿದ್ರೂ ಸಾಕಾಗಲ್ಲ ಅನಿಸುತ್ತೆ. ಸ್ವಲ್ಪ ಮಾಡಿದರೂ ಬಹಳ ಮಾಡಿದೆ ಅಂತ ತಿಳಿದುಕೊಳ್ಳುವವರ ಹೃದಯದಲ್ಲಿ ಪ್ರೀತಿ ಇರಲ್ಲ. ಜಾಸ್ತಿ ಮಾಡಿದರೂ ಇನ್ನೂ ಮಾಡಬೇಕು ಎನ್ನುವವರ ಹೃದಯದಲ್ಲಿ ಪ್ರೀತಿ ಇರಲಿದೆ. ದೇವಾಲಯ ಅನ್ನೋದು ಎಂದೂ ಮುಗಿಯಲ್ಲ. ಮಾಡ್ತಾನೆ ಇದ್ರೆ ಮಾಡ್ತಾನೆ ಇರಬೇಕು. ಭಕ್ತನ ಆಶಯವೂ ಅದು. ಈಗ ಅದು ಮೂರು ಅಂತಸ್ತು ಇದೆ. ಒಂದು ಅಂತಸ್ತು ಕಂಪ್ಲೀಟ್ ಆಗಿದೆ. ರಾಮಲಲ್ಲಾ ಅಲ್ಲಿ ಪ್ರತಿಷ್ಠಾಪನೆ ಆಗಲಿದ್ದಾನೆ. ಮುಂದೆ ಉಳಿದ ಎಲ್ಲವೂ ಮಾಡಲಿದ್ದಾರೆ. ಹಾಗಾಗಿ ಅದು ಅಪೂರ್ಣ ಅಲ್ಲ ಅಂತ ಹೇಳಿದರು.