ಮದುವೆಯಾಗಿ ಎರಡೇ ವರ್ಷಕ್ಕೆ ಶವವಾದ ಮಹಿಳೆ

Public TV
1 Min Read
ctd death 2

ಚಿತ್ರದುರ್ಗ: ಮದುವೆಯಾಗಿ ಎರಡೇ ವರ್ಷಕ್ಕೆ ಮಹಿಳೆಯೊಬ್ಬಳು ಅನುಮಾನಸ್ಪ ರೀತಿಯಲ್ಲಿ ಸಾವನ್ನಪ್ಪಿದ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಲಂಬಾಣಿಹಟ್ಟಿ ಘಟನೆ ನಡೆದಿದೆ.

ಲಂಬಾಣಿಹಟ್ಟಿಯ ನಸ್ರೀನ್ ತಾಜ್ ಮೃತ ಮಹಿಳೆ. ವರದಕ್ಷಿಣೆ ಕಿರುಕುಳವೇ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಎರಡು ವರ್ಷದ ಹಿಂದೆ ಮೆಕಾನಿಕ್ ಕೆಲಸ ಮಾಡುತ್ತಿದ್ದ ಯಾಸೀನ್ ಜೊತೆ ನಸ್ರೀನ್ ವಿವಾಹವಾಗಿತ್ತು. ಮೊದಲು ದಂಪತಿ ಪ್ರೀತಿಯಿಂದಲೇ ಇದ್ದರು. ಎರಡು ಕುಟುಂಬಸ್ಥರು ಸಂತಸವಾಗಿದ್ದರು. ದಂಪತಿಗೆ ಮುದ್ದಾದ ಮಗು ಸಹ ಇತ್ತು. ಆದರೆ ಇತ್ತೀಚಿಗೆ ಹಲವು ದುಶ್ಚಟಗಳಿಗೆ ಬಿದ್ದಿದ್ದ ಯಾಸೀನ್, ಹಣದ ವ್ಯಾಮೋಹದಿಂದಾಗಿ ಪತ್ನಿ ನಸ್ರೀನ್‍ಗೆ ವರದಕ್ಷಿಣೆ ಕಿರುಕುಳ ನೀಡತೊಡಗಿದ್ದ ಎಂದು ಯಾಶೀನ್ ಸಂಬಂಧಿಕರು ಆರೋಪಿಸಿದ್ದಾರೆ.

Police Jeep

ಯಾಸೀನ್ ಸಣ್ಣಪುಟ್ಟ ವಿಚಾರಕ್ಕೆ ನಿತ್ಯವೂ ಮನೆಯಲ್ಲಿ ಜಗಳ ಮಾಡುತ್ತಿದ್ದ. ಈ ವೇಳೆ ಪತ್ನಿಗೆ ಹೊಡೆಯುತ್ತಿದ್ದ ಹಾಗೂ ಕಿರುಕುಳ ನೀಡಿ ಹಣ ತರುವಂತೆ ಹಿಂಸಿಸುತ್ತಿದ್ದ ಎಂದು ನಸ್ರೀನ್ ಕುಟುಂಬಸ್ಥರು ದೂರಿದ್ದಾರೆ.

ಕಿರುಕುಳದಿಂದ ಬೇಸತ್ತ ನಸ್ರೀನ್ ತಾಜ್ ಹಲವು ಬಾರಿ ತವರು ಮನೆಗೆ ಈ ಕುರಿತು ಸುದ್ದಿ ಮುಟ್ಟಿಸಿದ್ದಳು. ಭಾನುವಾರ ಬೆಳಗ್ಗೆ ಆಕೆಯ ತವರಿನವರು ಬಂದು ನೋಡಿದರೆ ನಸ್ರೀನ್ ಶವವಾಗಿದ್ದಳು. ನೇಣು ಬಿಗಿದ ಸ್ಥಿತಿಯಲ್ಲಿ ಮಂಚದ ಮೇಲೆ ಶವ ನೇತಾಡುತ್ತಿತ್ತು. ಇದನ್ನು ಕಂಡು ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು, ಇದು ಆತ್ಮಹತ್ಯೆ ಅಲ್ಲ, ಆಕೆಯ ಪತಿ ಯಾಸೀನ್ ಹಾಗೂ ಕುಟುಂಬದವರು ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಚದ ಮೇಲೆ ನೇಣು ಹಾಕಿಕೊಳ್ಳಲು ಹೇಗೆ ಸಾಧ್ಯ? ಆಕೆಗೆ ಹಿಂಸೆ ನೀಡಿ ಕೊಲೆಗೈದಿದ್ದಾರೆ. ಬಳಿಕ ಶವವನ್ನು ನೇಣು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

police

ವಿಷಯ ತಿಳಿಯುತ್ತಿದ್ದಂತೆ ಹೊಳಲ್ಕೆರೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಯಾಸೀನ್‍ನನ್ನು ವಶಕ್ಕೆ ಪಡೆದಿದ್ದಾರೆ. ಶನಿವಾರ ನಮ್ಮಿಬ್ಬರ ಮಧ್ಯೆ ಜಗಳ ಆಗಿದ್ದು ನಿಜ. ಆದರೆ ನಾವು ಹತ್ಯೆ ಮಾಡಿಲ್ಲ. ಬದಲಾಗಿ ನಸ್ರೀನ್ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *