ಚಿಕ್ಕಬಳ್ಳಾಪುರ: ವಿವಾಹಿತ ಮಹಿಳೆ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ವ್ಯಕ್ತಿಯ ಮೇಲೆ ಮಹಿಳೆಯ ಗಂಡ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಜಿಲ್ಲೆಯ ಗುಡಿಬಂಡೆ ತಾಲೂಕು ರಾಮಕೃಷ್ಣಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರಾಮು ಎಂಬಾತನ ಪತ್ನಿಯ ಮೇಲೆ ಈಶ್ವರ್ ಕಣ್ಣು ಹಾಕಿದ್ದ. ನಂತರ ಶುಕ್ರವಾರ ಮಧ್ಯಾಹ್ನ ಬಲತ್ಕಾರಕ್ಕೆ ಯತ್ನಿಸಿದ್ದಾನೆ.
ಮನೆಗೆ ಬಂದ ನಂತರ ಮಧ್ಯಾಹ್ನ ನಡೆದ ಘಟನೆ ತಿಳಿದ ರಾಮು, ಮಧ್ಯರಾತ್ರಿಯಲ್ಲಿ ತನ್ನ ಬೆಂಬಲಿಗರ ಗುಂಪು ಕಟ್ಟಿಕೊಂಡು ಈಶ್ವರ್ ಮನೆ ಹಾಗೂ ಸಂಬಂಧಿಕರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ.
ಘಟನೆಯಲ್ಲಿ ಈಶ್ವರ್ ಸೇರಿದಂತೆ ನಾಲ್ವರು ಸಂಬಂಧಿಕರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಈ ಸಂಬಂಧ ರಾಮು ಸೇರಿದಂತೆ 5 ಮಂದಿಯನ್ನ ಬಂಧಿಸಿರುವ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.