ಚಿಕ್ಕಬಳ್ಳಾಪುರ: ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅವರಿಬ್ಬರು 8 ವರ್ಷಗಳ ಕಾಲ ಪರಸ್ಪರ ಪ್ರೀತಿಸಿ, ಅಂರ್ತಜಾತಿ ವಿವಾಹವಾಗಿದ್ದರು. ಆದ್ರೆ ಅದೇನಾಯ್ತೋ ಏನೋ ಮದುವೆಯಾದ ಒಂದೂವರೆ ತಿಂಗಳು ಕಳೆಯುವಷ್ಟರಲ್ಲಿ ಆ ಯುವಕನಿಗೆ ಯುವತಿ ಬೇಡವಾಗಿದ್ದಾಳೆ. ಇಂತಹದ್ದೊಂದು ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ರಜನಿ ಹಾಗೂ ಬಾಗೇಪಲ್ಲಿ ಮೂಲದ ವಿನೋದ್ ಇಬ್ಬರೂ 8 ವರ್ಷಗಳಿಂದ ಪರಸ್ಪರ ಪ್ರೀತಿಸಿ, ಕಳೆದ ಆಕ್ಟೋಬರ್ ತಿಂಗಳ 16ರಂದು ಮದುವೆಯಾಗಿದ್ದರು. ಈ ಮದುವೆಗೆ ರಜನಿ ಪೋಷಕರು ಓಪ್ಪಿದ್ದರು. ಆದ್ರೆ ವಿನೋದ್ ಪೋಷಕರು ಜಾತಿ ಬೇರೆ-ಬೇರೆ ಎಂಬ ಕಾರಣಕ್ಕೆ ಮದುವೆಗೆ ಓಪ್ಪಿರಲಿಲ್ಲ. ಆದ್ರೂ ತನ್ನ ಪೋಷಕರ ವಿರೋಧದ ನಡುವೆಯೂ ರಜನಿ ಕೈ ಹಿಡಿದ ವಿನೋದ್, ಮದುವೆಯಾದ ನಂತರ ಒಂದೂವರೆ ತಿಂಗಳು ಜೊತೆಯಲ್ಲಿಯೇ ಇದ್ದು ಸಂಸಾರ ನಡೆಸಿದ್ದ.
ಅದೇನಾಯ್ತೋ ಏನೋ ನವೆಂಬರ್ 28ರಂದು ಎಂದಿನಂತೆ ಕೆಲಸಕ್ಕೆ ಹೋಗಿ ಬರುವುದಾಗಿ ಹೋದ ವಿನೋದ್ ಮತ್ತೆ ಮನಗೆ ವಾಪಾಸ್ಸು ಬಂದಿಲ್ಲ. ಇದ್ರಿಂದ ಕಂಗಲಾದ ರಜನಿ, ವಿನೋದ್ ತಂದೆ-ತಾಯಿಯನ್ನ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಿದ್ದಾರೆ. ಘಟನೆ ನಂತರ ಮೋಸ ಹೋದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು ಸದ್ಯ ಚೇತರಿಸಿಕೊಂಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ತನ್ನ ಗಂಡ ಕಾಣೆಯಾಗಿದ್ದಾನೆ ಅಂತ ಯುವತಿ ದೂರು ಕೂಡ ನೀಡಿದ್ದಾರೆ.
ಮತ್ತೊಂದೆಡೆ ತನ್ನ ಗಂಡ ಕಾಣೆಯಾಗಲು ಆತನ ತಂದೆ-ತಾಯಿಯೇ ಕಾರಣ. ಆತನಿಗೆ ಎರಡನೇ ಮದುವೆ ಮಾಡಲು ಅವರೆಲ್ಲಾ ಪ್ಲಾನ್ ಮಾಡಿ, ನನ್ನ ಗಂಡನನ್ನ ನಾಪತ್ತೆಯಾಗುವಂತೆ ಮಾಡಿದ್ದಾರೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಗಂಡ ನನಗೆ ಬೇಕು, ನ್ಯಾಯ ಕೊಡಿಸಿ ಅಂತ ಅಂಗಲಾಚುತ್ತಿದ್ದಾರೆ.