ಬೆಂಗಳೂರು: ನಗರದ ಎಂಜಿ ರಸ್ತೆಯ ಅಜಂತಾ ಟ್ರಿನಿಟಿ ಹೊಟೆಲ್ ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 7 ಜನ ಪಾರಾಗಿದ್ದಾರೆ.
ಸೋಮವಾರ ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದ್ದು, ಕೂದಲೆಳೆಯ ಅಂತರದಲ್ಲಿ ಭಾರೀ ಅಗ್ನಿ ಅವಘಡ ತಪ್ಪಿದಂತಾಗಿದೆ. ಘಟನೆ ವೇಳೆ 7 ಜನ ಜಸ್ಟ್ ಸೇಫ್ ಆಗಿದ್ದಾರೆ.
ನಾಗೇಶ್, ಮಹೇಂದ್ರ, ಸತ್ಯಪ್ರಕಾಶ್, ದಿನೇಶ್, ಅಭಿಷೇಕ್, ರಾಚಪ್ಪಜಿ ಮತ್ತು ಶೇಖರ್ ಅವರನ್ನು ರಕ್ಷಣೆ ಮಾಡಲಾಗಿದೆ. 7 ಜನರಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಪಾರ್ಕಿಂಗ್ ಲಾಟ್ ನಲ್ಲಿದ್ದ ಒಂದು ಆಟೋ, ಒಂದು ಜೀಪ್ ಸುಟ್ಟು ಕರಕಲಾಗಿದೆ.
ದಟ್ಟ ಹೊಗೆ ಆವರಿಸಿದ್ದು, ಉಸಿರಾಡಲಾಗದೇ ಹೊಟೆಲ್ ನಲ್ಲಿದ್ದ ಓರ್ವ ವ್ಯಕ್ತಿ ಎರಡನೇ ಮಹಡಿಯಿಂದ ಕಿಟಕಿ ಮೂಲಕ ಜಿಗಿದಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣ ಭಸ್ಮವಾಗಿದ್ದು, ಹೋಟೆಲ್ ನ ರಿಸಪ್ಷನ್ ಜಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಡೀ ಅಜಂತಾ ಹೋಟೆಲ್ ನಲ್ಲಿ ದಟ್ಟ ಹೊಗೆ ಆವರಿಸಿದೆ. ನಾಲ್ಕು ಬ್ಲಾಕ್ ನ ತಲಾ 24 ರೂಮ್ ಸೇರಿ 96 ರೂಮ್ಗಳನ್ನು ಹೊಟೆಲ್ ಹೊಂದಿದೆ. ಹೋಟೆಲ್ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಕೂಡ ಇದ್ದು, ಭಾರೀ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಮೂರು ಮಳಿಗೆಗೆ ಹೊಗೆ ಹಬ್ಬಿದ್ದು, ವ್ಯಕ್ತಿ 2ನೇ ಮಹಡಿಯಿಂದ ಕಿಟಕಿ ಮೂಲಕ ಜಿಗಿದಿದ್ದಾರೆ.
ಈ ಕುರಿತು ಡಿಸಿಪಿ ಶರಣಪ್ಪ ಮಾಹಿತಿ ನೀಡಿದ್ದು, ಹೋಟೆಲಿನ ಕೆಳಗಿನ ಮಹಡಿಯಲ್ಲಿಬೆಂಕಿ ಕಾಣಿಸಿಕೊಂಡಿದೆ. ಸುಮಾರು 10:30ಕ್ಕೆ ಹೋಟಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹೋಟೆಲ್ನಲ್ಲಿ 5 ಜನ ಇದ್ದರು. 5 ಜನರನ್ನೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಐವರಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಅಗ್ನಿಶಾಮಕ ಸಿಬ್ಬಂದಿ ಕಾರಣ ಪತ್ತೆಮಾಡಲಿದ್ದಾರೆ ಎಂದು ತಿಳಿಸಿದರು.
ಹೋಟಲ್ ಕಿಟಿಕಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡ ರಾಚಪ್ಪಜಿ ಮತ್ತು ಶೇಖರ್ ಹೇಳಿಕೆ ನೀಡಿದ್ದು, ರಾತ್ರಿ ಸುಮಾರು 10:15ಕ್ಕೆ ಹೋಟಲ್ ಗೆ ಬಂದೆವು. ಊಟ ಮಾಡಿ, ಟಿವಿ ನೋಡುತ್ತಿರಬೇಕಾದರೆ ನಮ್ಮ ಡ್ರೈವರ್ ಬಂದು ಬೆಂಕಿ ಬಿದ್ದಿದೆ ಎಂದು ಹೇಳಿದರು. ಹೊರ ಬರಲು ಕಾರಿಡಾರ್ ಗೆ ಬಂದ್ವಿ, ಅಷ್ಟೋತ್ತಿಗೆ ಎರಡನೇ ಮಹಡಿಯಲ್ಲಿ ದಟ್ಟ ಹೊಗೆ ತುಂಬಿಕೊಂಡಿತ್ತು. ಬೆಂಕಿ ಹೆಚ್ಚಾಗ್ತಿತ್ತು, ಕೊಡಲೇ ರೂಮ್ ಕಿಟಿಕಿ ಒಡೆದು ಅಲ್ಲಿಂದ ಜಿಗಿದು ಪ್ರಾಣ ಉಳಿಸಿಕೊಂಡೆವು ಎಂದು ಹೇಳಿದ್ದಾರೆ.
ಒಟ್ಟು 96 ರೂಮ್ ಇರುವ ಹೋಟೆಲ್ ನಲ್ಲಿ ಬುಕ್ ಆಗಿದ್ದು ಕೇವಲ 1 ರೂಮ್ ಮಾತ್ರ. ಹೋಟೆಲ್ ಮಾಲೀಕರ ಕಡೆಯಿಂದ ರಾತ್ರಿ ಇಬ್ಬರು ಬಂದು ಉಳಿದಿದ್ದರು ಎನ್ನಲಾಗುತ್ತಿದೆ. ಉಳಿದಂತೆ 95 ರೂಮ್ ಗಳು ಖಾಲಿ ಇದ್ದವು. ಕೇವಲ ಕೆಲಸಗಾರರು ಮಾತ್ರ ಐವರಿದ್ದರು. ಹೀಗಾಗಿ 7 ಜನರ ರಕ್ಷಣೆ ಬೇಗನೇ ಆಗಿದೆ. ರೂಮ್ ಗಳು ಫುಲ್ ಆಗಿದ್ದರೆ ಮಾರಣಹೋಮವೇ ನಡೆಯುತ್ತಿತ್ತು.
ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಕೂಡ ಇತ್ತು. ಅಲ್ಲದೇ ಹೋಟೆಲ್ ಪಕ್ಕದಲ್ಲೆ ಪೆಟ್ರೋಲ್ ಬಂಕ್ ಇದ್ದು, ಅಲ್ಲಿವರೆಗೆ ಬೆಂಕಿ ವ್ಯಾಪಿಸಿದ್ದರೂ ದೊಡ್ಡ ಅನಾಹುತ ನಡೆದುಹೋಗ್ತಿತ್ತು. ಸದ್ಯ ಘಟನೆ ನಡೆದ ಐದೇ ನಿಮಿಷಕ್ಕೆ ಅಗ್ನಿಶಾಮಕ ವಾಹನ ಆಗಮಿಸಿದೆ. ಹೀಗಾಗಿಯೇ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ವಿಗ್ರಹಕ್ಕೆ ಏನೂ ಆಗಿಲ್ಲ
ಇಡೀ ಹೋಟೆಲ್ ಸುಟ್ಟು ಕರಕಲಾದರೂ ಆ ವಿಗ್ರಹಕ್ಕೆ ಮಾತ್ರ ಏನು ಆಗಿಲ್ಲ, ಅಜಂತಾ ಟ್ರಿನಿಟಿ ಹೋಟೆಲ್ ರಿಸೆಪ್ಷನ್ ಬಳಿ ಇದ್ದ ಗಣೇಶ ಕಲ್ಲಿನ ವಿಗ್ರಹಕ್ಕೆ ಯಾವುದೇ ಹಾನಿಯಾಗಿಲ್ಲ. ಹೋಟೆಲ್ ಸುಟ್ಟು, ಗೋಡೆ ಕುಸಿದು ಬೀಳುತ್ತಿದ್ದರೂ ವಿಗ್ರಹವಿದ್ದ ಜಾಗ ಮಾತ್ರ ಏನೂ ಆಗಿಲ್ಲ. ಗಣೇಶನ ಮೂರ್ತಿಗೂ ಯಾವುದೇ ಹಾನಿ ಆಗಿಲ್ಲ.