ಬೆಂಗಳೂರು: ಹೊನ್ನಾವರದಲ್ಲಿ ನಡೆದ ಯುವಕನ ಹತ್ಯೆಯ ಘಟನೆಗೆ ಕಾಂಗ್ರೆಸ್ ಕಾರಣ ಅನ್ನುವ ಬಿಜೆಪಿ ಪಕ್ಷದ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂತಹ ಘಟನೆಯನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ರಾಜಕೀಯ ಬಣ್ಣ ಕಟುತ್ತಿದ್ದಾರೆ. ಸಾವನ್ನಪ್ಪಿರುವ ಯುಕವನ ಮರಣೋತ್ತರ ಪರೀಕ್ಷೆ ವರದಿ ಬಂದಿಲ್ಲ. ಯಾಕೆ ಸತ್ತಿದ್ದಾರೆ, ಹೇಗೆ ಸತ್ತಿದ್ದಾರೆ ಎಂಬ ಅಂಶಗಳ ಬಗ್ಗೆ ಮಾಹಿತಿ ಇಲ್ಲ. ಹೀಗಿರುವಾಗ ಇದು ಕೊಲೆ ಅಂತ ಹೇಳೋದು ಸರಿಯಲ್ಲ ಎಂದರು.
ಬಿಜೆಪಿ ನಾಯಕರು ಕುಮುಟದ ಜನರನ್ನು ಭಾವನಾತ್ಮಕವಾಗಿ ಕೆರಳಿಸುತ್ತಿದ್ದಾರೆ. ಇದು ಕೇವಲ ರಾಜಕೀಯ ಉದ್ದೇಶಕ್ಕೆ ಬಿಜೆಪಿ ಮಾಡುತ್ತಿದೆ. ಚುನಾವಣೆ ಬರುತ್ತಿರುವುದರಿಂದ ಬಿಜೆಪಿಯವರು ರಾಜಕೀಯ ಲಾಭಕ್ಕೆ ಪಡೆಯಲು ಹೀಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕಳೆದ ಬುಧವಾರ ಕ್ಷುಲ್ಲಕ ಕಾರಣಕ್ಕೆ ನಡೆದ ಕೋಮ ಗಲಭೆ ಘಟನೆಯಲ್ಲಿ 19 ವರ್ಷದ ಪರೇಶ್ ಮೇಸ್ತ ಎಂಬ ಯುವಕ ಕಾಣೆಯಾಗಿದ್ದರು. ನಾಪತ್ತೆಯಾಗಿದ್ದ ಯುವಕನ ಶವ ಘಟನೆ ನಡೆದ ಘಟನಾ ಸ್ಥಳದ ಸಮೀಪದ ಶನಿ ದೇವಸ್ಥಾನದ ಬಳಿ ಇರುವ ಶಟ್ಟಿ ಕೆರೆಯಲ್ಲಿ ಪತ್ತೆಯಾಗಿತ್ತು. ದುಷ್ಕರ್ಮಿಗಳು ಯುವಕನ ಕೈಕಟ್ಟಿ ಹಲ್ಲೆ ಮಾಡಿ ಕೊಲೆ ಮಾಡಿ ನಂತರ ಶವವನ್ನು ಕೆರೆಗೆ ಎಸೆದು ಹೋಗಿದ್ದಾರೆ ಎಂದು ಶಂಕೆ ವ್ಯಕ್ತವಾಗಿತ್ತು. ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು ಯುವಕನ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪ ಮಾಡಿದ್ದರು. ( ಇದನ್ನೂ ಓದಿ: ಕುಮಟಾದಲ್ಲಿ ಭುಗಿಲೆದ್ದ ಹಿಂಸಾಚಾರ – ಐಜಿ ನಿಂಬಾಳ್ಕರ್ ಕಾರ್ ಗೆ ಬೆಂಕಿ, ಲಾಠಿಚಾರ್ಜ್ )