ಹಾಸನ: ಅರಸೀಕೆರೆ ನಗರಸಭೆಯ ಏಳು ಸದಸ್ಯರನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಎಲ್ಲರೂ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಸುದೀರ್ಘ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ಜಿಲ್ಲಾಧಿಕಾರಿ ತೀರ್ಪುನ್ನು ಎತ್ತಿ ಹಿಡಿದಿದೆ.
ಅರಸೀಕೆರೆ ನಗರಸಭೆ ಒಂದನೇ ವಾರ್ಡ್ ಸದಸ್ಯ ಹರ್ಷವರ್ಧನ್ ರಾಜ್, 25ನೇ ವಾರ್ಡ್ನ ಸದಸ್ಯ ಬಿ.ಎನ್.ವಿದ್ಯಾಧರ್, 19ನೇ ವಾರ್ಡ್ನ ಸದಸ್ಯ ದರ್ಶನ್, 18ನೇ ವಾರ್ಡ್ನ ಸದಸ್ಯೆ ಕವಿತಾದೇವಿ, 28ನೇ ವಾರ್ಡ್ನ ಸದಸ್ಯೆ ಆಯೇಶಾ ಸಿಕಂದರ್, 9ನೇ ವಾರ್ಡ್ನ ಸದಸ್ಯ ಚಂದ್ರಶೇಖರ್ ಜೆಡಿಎಸ್ನಿಂದ ಗೆದ್ದಿದ್ದರು. ಆನಂತರದ ಬೆಳವಣಿಗೆಯಲ್ಲಿ ಜೆಡಿಎಸ್ನಿಂದ ಬಂಡಾಯವೆದ್ದಿದ್ದರು. ಇದನ್ನೂ ಓದಿ: ಚೆನ್ನೈನಿಂದ ಚಿಂಗವನಂಗೆ ರೈಲು ಸೇವೆ – ಶಬರಿಮಲೆ ಯಾತ್ರಾರ್ಥಿಗಳಿಗೆ ಬಂಪರ್ ಆಫರ್
ಬಹುಮತವಿಲ್ಲದಿದ್ದರೂ ಮೀಸಲಾತಿ ಆಧಾರದ ಮೇಲೆ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಆರು ನಗರಸಭೆ ಸದಸ್ಯರು ಬೆಂಬಲ ನೀಡಿದ್ದರು. ಇವರ ಜೊತೆಗೆ 15ನೇ ವಾರ್ಡ್ನಿಂದ ಪಕ್ಷೇತರ ಸದಸ್ಯನಾಗಿ ಆಯ್ಕೆಯಾಗಿದ್ದ ಪುಟ್ಟಸ್ವಾಮಿ ಮೊದಲು ಜೆಡಿಎಸ್ಗೆ ಬೆಂಬಲ ಘೋಷಿಸಿದ್ದರು. ನಂತರ ಜೆಡಿಎಸ್ಗೆ ನೀಡಿದ್ದ ಬೆಂಬಲ ವಾಪಸ್ ಪಡೆದು ಆರು ಮಂದಿ ಸದಸ್ಯರ ಜೊತೆ ಪುಟ್ಟಸ್ವಾಮಿ ಕೂಡ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರು.
ಏಳು ಮಂದಿ ಸದಸ್ಯರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು, ಇವರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಅರಸೀಕೆರೆ ಜೆಡಿಎಸ್ ತಾಲೂಕು ಅಧ್ಯಕ್ಷ ಬಿಳಿಚೌಡಯ್ಯ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಡಿಸಿ ಆರ್.ಗಿರೀಶ್ ಏಳು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ತೀರ್ಪು ನೀಡಿದ್ದರು. ಇದನ್ನೂ ಓದಿ: ಸಿಬ್ಬಂದಿಗೆ ಮೆಣಸಿನ ಪುಡಿ ಎರಚಿ ಬೆಲೆ ಬಾಳುವ ನೆಕ್ಲೇಸ್ ಕದ್ದ ಖತರ್ನಾಕ್ ಅಪ್ಪ-ಮಗಳು
ಜಿಲ್ಲಾಧಿಕಾರಿ ತೀರ್ಪನ್ನು ಪ್ರಶ್ನಿಸಿ ಏಳು ಮಂದಿ ನಗರಸಭೆ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಇಂದು ಅರ್ಜಿ ವಜಾ ಮಾಡಿ ನಗರಸಭೆ ಸದಸ್ಯರ ಅನರ್ಹಗೊಳಿಸಿದೆ.