ಚಿಕ್ಕಬಳ್ಳಾಪುರ: ಇನ್ನೇನು 2021 ಕಳೆದು 2022 ರನ್ನು ಸ್ವಾಗತಿಸಲು ಕ್ಷಣಗಣನೆ ಆರಂಭವಾಗುತ್ತಿದೆ. ಹೀಗಾಗಿ ಒಂದೆಡೆ ಸಂತಸ ಮತ್ತೊಂದೆಡೆ ಹೊಸವರ್ಷವನ್ನು ಸಾರ್ವಜನಿಕವಾಗಿ ಆಚರಿಸಲಾಗದೆ ಅಸಮಾಧಾನ ಎದ್ದಿದೆ. ಕಫ್ರ್ಯೂ ಮಧ್ಯೆಯೂ ಹೊಸ ವರ್ಷಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸಬಾರದು, ಆಚರಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇತ್ತ ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್ ರೆಸಾರ್ಟ್, ಕೆಫೆ ಹಾಗೂ ಹೋಮ್ ಸ್ಟೇ ಮಾಲೀಕರನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಮೂರು ದಿನಗಳ ಕಾಲ ಪ್ರವಾಸಿಗರ ಪ್ರವೇಶ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಮಾಡಿದೆ. ಇದನ್ನೂ ಓದಿ: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ದೋಖಾ – ಆರೋಪಿ ಅರೆಸ್ಟ್
ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಅದ್ಧೂರಿ ಹೊಸ ವರ್ಷಾಚರಣೆ ಮಾಡಲು ನಿರ್ಬಂಧ ಇರುವ ಹಿನ್ನೆಲೆ ಕಳ್ಳ ಮಾರ್ಗದ ಮೂಲಕ ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್ ರೆಸಾರ್ಟ್, ಕೆಫೆ ಹಾಗೂ ಹೋಮ್ ಸ್ಟೇ ಗಳಲ್ಲಿ ಹೊಸ ವರ್ಷಾಚರಣೆ ಮಾಡುವ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಪೊಲೀಸ್ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಪೊಲೀಸರು ಜಂಟಿ ಸಭೆ ನಡೆಸಿದ್ದಾರೆ. ಈ ವೇಳೆ ಹೋಟೆಲ್, ರೆಸಾರ್ಟ್, ಕೆಫೆ ಹಾಗೂ ಹೋಮ್ ಸ್ಟೇ ಮಾಲಿಕರಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ BSF ಯೋಧನ ಅಂತ್ಯಕ್ರಿಯೆ
ಮತ್ತೊಂದೆಡೆ ನಂದಿಗಿರಿಧಾಮವನ್ನು ಜನವರಿ 2ರ ಬೆಳಗ್ಗೆ ಆರು ಗಂಟೆವರೆಗೂ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ನಂದಿಗಿರಿಧಾಮಕ್ಕೆ ಬಂದವರು ಅಕ್ಕ-ಪಕ್ಕದ ಬೆಟ್ಟ ಗುಡ್ಡಗಳತ್ತ ಮುಖ ಮಾಡಿ ಕುಡಿದು ಕುಣಿದು ತೂರಾಡಬಹುದು. ಇದರಿಂದ ಸಮಸ್ಯೆ ಆಗುತ್ತೆ ಅಂತ ಅರಣ್ಯ ಇಲಾಖೆ ರಾತ್ರಿ ವೇಳೆ ಅರಣ್ಯ ಪ್ರವಾಸೋದ್ಯಮವನ್ನು ಬಂದ್ ಮಾಡಿದೆ. ಬೆಳಗ್ಗಿನ ಜಾವದಲ್ಲಿ ಮಾತ್ರ ಸ್ಕಂದಗಿರಿ, ಚನ್ನಗಿರಿ ಹಾಗೂ ಬ್ರಹ್ಮಗಿರಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಅಂತ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸಲನ್ ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಸಹ ಪ್ರವಾಸಿಗರು ಬಾರದಂತೆ ಬೆಟ್ಟ ಗುಡ್ಡಗಳ ಕಡೆ ಬಂದೋಬಸ್ತ್ ಮಾಡಿದೆ.