ಚಿಕ್ಕಬಳ್ಳಾಪುರ: ಮುಂಗಾರು ಮಳೆಯ ಆರ್ಭಟಕ್ಕೆ ಭಾರೀ ಮರಗಳು ಧರೆಗೆ ಉರುಳಿದ್ದು, ಹಲವೆಡೆ ಮನೆಗಳಿಗೆ ಹಾನಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ, ಗುಂಡಮಗೆರೆ, ಹೊಸಹಳ್ಳಿ, ಆರೂಢಿ ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿದ್ದು, ಹಲವು ಅವಾಂತರಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ರೈತರ ಖಾತೆಗೆ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನ ವರ್ಗಾವಣೆ
ಸತತ 30 ನಿಮಿಷಗಳಕಾಲ ಸುರಿದ ಭಾರೀ ಮಳೆಗೆ ತಾಲೂಕಿನ ಮಾಕಳಿ ಗ್ರಾಮದಲ್ಲಿ ಮರಗಳು ಉರುಳಿಬಿದ್ದು ಮನೆಗಳಿಗೆ ಹಾನಿಯಾಗಿವೆ. ಇನ್ನೂ ಕೆಲ ಮನೆಯ ಛಾವಣಿಗಳು ಹಾರಿಹೋಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ. ವಿದ್ಯುತ್ ಕಂಬಗಳು ಉರುಳಿ ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಇದೇ ಗ್ರಾಮದ ರಾಮಕೃಷ್ಣಪ್ಪ, ಗೋಪಾಲ್, ರೂಪಾ ಎನ್ನುವವರಿಗೆ ಸೇರಿದ ಮನೆಯ ಶೀಟುಗಳು ಹಾರಿಹೋಗಿವೆ. ಅಲ್ಲದೆ ರೈತ ಜಯಣ್ಣ ಅವರಿಗೆ ಸೇರಿದ ತೋಟದ ಮನೆಯ ಸುತ್ತ ನಿರ್ಮಿಸಿದ್ದ 100 ಅಡಿ ಕಾಂಪೌಂಡ್ ಉರುಳಿ ಬಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ ಯೋಗಿ ಆದಿತ್ಯನಾಥ್
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೆಲ ದಿನಗಳ ಹಿಂದೆ ಮುಂಗಾರು ಪೂರ್ವ ಮಳೆ ಅವಾಂತರ ಸೃಷ್ಟಿ ಮಾಡಿತ್ತು. ಬಳಿಕ ಮಳೆ ಬಿಡುವು ನೀಡಿತ್ತು. ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಮುಂದುವರಿದಿದೆ.
ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.