ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಹಾಸ್ಟೆಲ್ ವಾರ್ಡನ್ನಿಂದ ಹಲ್ಲೆಗೆ ಒಳಗಾಗಿದ್ದ ಒಂಬತ್ತು ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ವಿಜಯ್ ಕುಮಾರ್ ಹಿರೇಮಠ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಮೂಲದ ವಿಜಯ್ ಕುಮಾರನನ್ನು ನಾಲ್ಕು ತಿಂಗಳ ಹಿಂದೆ ಹಾನಗಲ್ ಪಟ್ಟಣದ ಛಾತ್ರಾಲಯ ಎಂಬ ಹಾಸ್ಟೆಲ್ ಗೆ ಸೇರಿಸಲಾಗಿತ್ತು. ಸೆಪ್ಟೆಂಬರ್ 3 ರಂದು ವಾರ್ಡನ್ ಶ್ರವಣಕುಮಾರ್ ಪೆನ್ಸಿಲ್ ವಿಚಾರವಾಗಿ ಬಾಲಕನನ್ನು ಥಳಿಸಿದ್ದ ಎಂದು ದೂರಿನಲ್ಲಿ ದಾಖಲಾಗಿದೆ.
ಹಲ್ಲೆಯಿಂದ ಜರ್ಜರಿತಗೊಂಡಿದ್ದ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ ವಾರ್ಡನ್ ಬಾಲಕನ ಹೊಟ್ಟೆ ಭಾಗಕ್ಕೆ ಒದ್ದಿದ್ದ ಭಾಗ ಊದಿಕೊಂಡ ಕಾರಣ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಜಯ್ ಕುಮಾರ್ ಇವತ್ತು ಮೃತಪಟ್ಟಿದ್ದಾನೆ.
ಬಾಲಕನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಮೃತ ವಿಜಯ್ ಕುಮಾರ್ ತಂದೆ ಅಕ್ಟೋಬರ್ 3 ರಂದು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ 323 ಕಲಂನಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಾದ ನಂತರ ವಾರ್ಡನ್ ಶ್ರವಣಕುಮಾರ್ ನಾಪತ್ತೆ ಆಗಿದ್ದಾನೆ. ಪೊಲೀಸರು ಆರೋಪಿ ವಾರ್ಡನ್ ಶ್ರವಣಕುಮಾರ್ ಬಂಧನಕ್ಕಾಗಿ ವಿಶೇಷ ಜಾಲ ಬೀಸಿದ್ದಾರೆ.