ಹಾಸನ: ಇಲ್ಲಿನ ನಂದಗೊಂಡನಹಳ್ಳಿಯಲ್ಲಿ ಅಕ್ರಮವಾಗಿ ಮರ ಕಡಿದ ಪ್ರಕರಣದಲ್ಲಿ ಮತ್ತೋರ್ವ ಅಧಿಕಾರಿ ತಲೆದಂಡವಾಗಿದೆ. ಪ್ರಕರಣದಲ್ಲಿ ಇಲ್ಲಿಯವರೆಗೂ ಒಟ್ಟು ಐವರು ಅಧಿಕಾರಿಗಳು ಅಮಾನತು ಮಾಡಲಾಗಿದೆ.
ಪ್ರಕರಣದಲ್ಲಿ ನಿರ್ಲಕ್ಷ್ಯತೆ ವಹಿಸಿದ ಆರೋಪದ ಮೇಲೆ ಹಾಸನ (Hassan) ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಮೋಹನ್ ಕುಮಾರ್ ಅವರನ್ನು ಅಮಾನತುಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಸನ್ನ ಕುಮಾರ್.ವಿ ಆದೇಶ ಹೊರಡಿಸಿದ್ದಾರೆ. ಗುರುವಾರ ಎಸಿಎಫ್, ಆರ್ಎಫ್ಓ, ಡಿಆರ್ಎಫ್ಓ ಹಾಗೂ ಓರ್ವ ಸಿಬ್ಬಂದಿ ಸೇರಿ ನಾಲ್ವರ ಅಮಾನತುಗೊಳಿಸಲಾಗಿತ್ತು. ಇದನ್ನೂ ಓದಿ: ಬೈಲಹೊಂಗಲದಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರ ದುರ್ಮರಣ
ಡಿ.16 ರಂದು ಬೇಲೂರು ತಹಶೀಲ್ದಾರ್ ಮಮತಾರ ಸಮಯ ಪ್ರಜ್ಞೆಯಿಂದ ಪ್ರಕರಣ ಬಯಲಾಗಿತ್ತು. ಈ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ಮಹತ್ವ ಪಡೆದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ಕ್ರಮ ಕೈಗೊಂಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅವರು ಶುಂಠಿ ಬೆಳೆಯುವ ಉದ್ದೇಶದಿಂದ ಗ್ರಾಮದ ಜಯಮ್ಮ ಎಂಬವರ ಮೂರು ಎಕರೆ ಜಾಗವನ್ನು ಗುತ್ತಿಗೆ ಪಡೆದಿದ್ದರು. ಬಳಿಕ ಅಲ್ಲಿದ್ದ ಮರಗಳನ್ನು ಸೇರಿದಂತೆ ಸುತ್ತಲಿನ ಸುಮಾರು 12 ಎಕರೆ ಸರ್ಕಾರಿ ಗೋಮಾಳದಲ್ಲಿ ಬೆಳೆದಿದ್ದ ಅಮೂಲ್ಯ ಮರಗಳನ್ನು ಕಡಿದು ನಾಶ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಇದನ್ನೂ ಓದಿ: ಚೆಕ್ ಬೌನ್ಸ್ ಕೇಸ್ – ಸಚಿವ ಮಧು ಬಂಗಾರಪ್ಪಗೆ 6.96 ಕೋಟಿ ದಂಡ