ಬೆಂಗಳೂರು: ತನ್ನ ಕಂಠ ಸಿರಿಯಿಂದ ಇಡೀ ಕರ್ನಾಟಕದ ಮನೆ ಮಾತಾಗಿರುವ ಸರಿಗಮಪ ಖ್ಯಾತಿಯ ಹನುಮಂತಣ್ಣ ಭಾನುವಾರ ಖಾಸಗಿ ಶಾಲೆಯೊಂದು ಆಯೋಜನೆ ಮಾಡಿದ್ದ ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ ಹಾಗೂ ಹುತಾತ್ಮ ವೀರ ಯೋಧರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಖಾಸಗಿ ಶಾಲೆಯ ವತಿಯಿಂದ ಶಿವಕುಮಾರ ಸ್ವಾಮಿಗಳ ಹಾಗೂ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸರಿಗಮಪ ಖ್ಯಾತಿಯ ಹನುಮಂತ ಆಗಮಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದು ಕೊಟ್ಟಿತ್ತು.
ಶಾಲಾ ಮಕ್ಕಳ ಹಾಗೂ ಶಿಕ್ಷಕರ ಜೊತೆ ಯೋಧರ ಮತ್ತು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಾಡುಗಳನ್ನು ಹಾಡುವ ಮೂಲಕ ಹನುಮಂತಣ್ಣ ನೆರೆದಿದ್ದ ಶಾಲಾ ಮಕ್ಕಳು ಹಾಗೂ ಪೋಷಕರಿಗೆ ಮನರಂಜನೆ ನೀಡಿದರು. ನಂತರ ಹನುಮಂತಣ್ಣನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಪೋಷಕರು ಮೂಗಿ ಬಿದ್ದಿದ್ದು, ಆಗ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಕೊನೆಗೆ ಹನುಮಂತಣ್ಣ ಜನಗಳ ನುಕುನುಗ್ಗಲು ಮಧ್ಯೆ ಕಾರನ್ನು ಹತ್ತಿ ಹೊರಟು ಹೋದರು.