ಹಾಸನ: ಕಾಂಗ್ರೆಸ್ಗೆ ಮಾನ-ಮರ್ಯಾದೆ ಇಲ್ಲ. ಅವರಿಗೆ ನಾಚಿಕೆಯಾಗಬೇಕು. ಇದು ದೊಂಬರಾಟ. ಸುಳ್ಳಿನಿಂದ ಜಾಸ್ತಿ ದಿನ ರಾಜಕೀಯ ನಡೆಯಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಆಕ್ರೋಶ ಹೊರಹಾಕಿದ್ದಾರೆ.
ಮೇಕೆದಾಟು ಯೋಜನೆಗೆ ಜೆಡಿಎಸ್-ಬಿಜೆಪಿ ಎರಡು ಪಕ್ಷಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ದೇವೇಗೌಡರು ನೀರಾವರಿ ಮಂತ್ರಿಯಿಂದ ಇಳಿದ ಮೇಲೆ 30 ವರ್ಷಗಳು ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಆಳಿವೆ. ರಾಜ್ಯದಲ್ಲಿ ಹತ್ತು ವರ್ಷ ಬಿಜೆಪಿ, ಹತ್ತು ವರ್ಷ ಕಾಂಗ್ರೆಸ್ ಸರ್ಕಾರವಿತ್ತು. ಕೇಂದ್ರದಲ್ಲಿ ಹತ್ತು ವರ್ಷ ಯುಪಿಎ, ಎಂಟು ವರ್ಷ ಎನ್ಡಿಎ. ಸರ್ಕಾರವಿತ್ತು. ಸಮ್ಮಿಶ್ರ ಸರ್ಕಾರದಲ್ಲೂ ನೀರಾವರಿ ಮಂತ್ರಿ ಯಾರಿಗೂ ಕೊಟ್ಟಿರಲಿಲ್ಲ, ಅವರೇ ಗುತ್ತಿಗೆ ತೆಗೆದುಕೊಂಡಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಮ್ಮಿಶ್ರ ಸರ್ಕಾರದಲ್ಲಿ ಈಗ ಮೆರವಣಿಗೆ ಹೊರಟಿರುವವರೇ ಜಲಸಂಪೂನ್ಮೂಲ ಸಚಿವರಾಗಿದ್ದರು. ಅದರಲ್ಲಿ ರುಚಿ ಕಂಡು ಆ ಹುದ್ದೆಯನ್ನು ಅವರೇ ಇಟ್ಟುಕೊಂಡಿದ್ದರು. ಬೂತಯ್ಯನ ಮಗ ಅಯ್ಯು ಸಿನಿಮಾದಲ್ಲಿ ಬರುವ ಲೋಕನಾಥ್ ಅವರ ಉಪ್ಪಿನಕಾಯಿ ಪಾತ್ರಕ್ಕೆ ಡಿಕೆಶಿಯನ್ನು ಹೋಲಿಸಿದ ವ್ಯಂಗ್ಯವಾಡಿದರು.
ನಾಚಿಕೆಯಾಗಬೇಕು ಇವರಿಗೆ, ಇದು ದೊಂಬರಾಟ. ಈ ಹಿಂದೆ ನಮ್ಮನ್ನು ಕರೆದುಕೊಂಡು ಹೋಗಿ ದಸರಾ ನೋಡಿ, ಪ್ಯಾಲೇಸ್ ನೋಡಿ ಎನ್ನುತ್ತಿದ್ದರು. ಅದೇ ರೀತಿ ಇವರು ನಾವು ದುಡ್ಡು ಹೊಡೆಯುವುದು ನೋಡಿ, ಮೆರವಣಿಗೆ ನೋಡಿ ಎನ್ನುತ್ತಿದ್ದಾರೆ. ಸುಳ್ಳಿನಿಂದ ಜಾಸ್ತಿ ದಿನ ರಾಜಕೀಯ ನಡೆಯಲ್ಲ. ಈ ರಾಷ್ಟ್ರೀಯ ಪಕ್ಷದವರೇ ನೀರಾವರಿ ಮಂತ್ರಿಗಳಾಗಿದ್ದರು ಆಗ ಮಾಡಲಿಲ್ಲ. ಈಗ ನಮ್ಮ ಪಕ್ಷವನ್ನು ಎಳೆದು ತರುತ್ತಿದ್ದಾರೆ. ಈ ಕಾಂಗ್ರೆಸ್ಗೆ ಮಾನ-ಮರ್ಯಾದೆ ಇಲ್ಲ ಕಿಡಿಕಾರಿದರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ
ಯಾರೋ ಒಬ್ಬರು ಜ್ಯೋತಿಷಿ ನೀರಿನಲ್ಲಿ ಮುಳುಗಿ ಎಂದು ಹೇಳಿದ್ದಾರೆ. ಪೂಜೆ ಮಾಡಲು ಹೋಗಿ ದುಬುಕ್ ಅಂಥಾ ಬಿದ್ದರು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ಗೆ ಗ್ರಹಣ ಹಿಡಿದಿದೆ. ಈ ಪೂಜೆಯಿಂದನಾದರೂ ಗ್ರಹಣ ಹೋಗುತ್ತದೆ ಅಂದುಕೊಂಡಿದ್ದೇನೆ. ಜೆಡಿಎಸ್ ನೀರಾವರಿ ಯೋಜನೆಗಳಿಗೆ ತಡೆ ಒಡ್ಡಲ್ಲ. ಇವರು ಕರೆದಾಗ ಪಾದಯಾತ್ರೆಗೆ ಹೋಗಲು ನಾವೇನು ಇದಲ್ಲ. ನೀವು ಮಾಡಿರುವ ಕರ್ಮಕಾಂಡ, ನೀವು ರಾಜ್ಯಕ್ಕೆ ದ್ರೋಹ ಬಗೆದಿದ್ದೀರಿ. ನಮಗೆ ಚುನಾವಣೆ, ಅಧಿಕಾರ ಮುಖ್ಯವಲ್ಲ. ರಾಜ್ಯದ ನೀರಾವರಿ ಯೋಜನೆಗಳು, ನೆಲ, ಜಲ ಎಲ್ಲಾ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವುದೇ ನಮ್ಮ ಗುರಿ ಎಂದು ಹೇಳಿದರು.
ಜನಕ್ಕೆ ಕಾಂಗ್ರೆಸ್ ಮೇಲೆ ಪ್ರೀತಿ ಇದ್ದರೆ ಸ್ವಯಂಪ್ರೇರಿತವಾಗಿ ಪಾದಯಾತ್ರೆಗೆ ಬರುತ್ತಿದ್ದರು. ಪಾದಯಾತ್ರೆಗೆ ಬಂದವರಿಗೆ 300 ರೂ. ಪೆಟ್ರೋಲ್ ಟೋಕನ್ ಏಕೆ ಕೊಡುತ್ತಿದ್ದಾರೆ. ಎಲ್ಲರಿಗೂ ಪೊಂಗಲ್, ಬಜ್ಜೆ, ಪಲಾವ್ ಏಕೆ ಮಾಡಿಸುತ್ತಿದ್ದಾರೆ. ಜೆಡಿಎಸ್ ಅಂದರೆ ಭಯವಿದೆ. ಜೆಡಿಎಸ್ ಮುಗಿಸಲು ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ಅದಕ್ಕಾಗಿ ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ತೈಲ ಬೆಲೆ ಭಾರೀ ಏರಿಕೆ, ಕಜಕಿಸ್ತಾನದಲ್ಲಿ ಹಿಂಸಾಚಾರ – ಸರ್ಕಾರ ಪತನ