ರಾಯಚೂರು: ಇಂದು ರಾಯಚೂರಿನ ಬೋಳಮಾನದೊಡ್ಡಿಯಲ್ಲಿ ನಡೆದ ಸಾಮೂಹಿಕ ವಿವಾಹ ನಡೆಯುವ ವೇಳೆ ವರನೊಬ್ಬ ಬಿಸಿಲಿನ ತಾಪಕ್ಕೆ ಕುಸಿದು ಬೀಳುವ ಮೂಲಕ ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಬೋಳಮಾನದೊಡ್ಡಿ ಗ್ರಾಮದಲ್ಲಿ ವೆಂಕಟರಮಣ ದೇವಾಲಯದಲ್ಲಿ ನವರತ್ನ ಯುವಕ ಸಂಘ ಆಯೋಜಿಸಿದ್ದ 60 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಯಚೂರು ನಗರ ಶಾಸಕ ವೈದ್ಯ ಡಾ.ಶಿವರಾಜ್ ಪಾಟೀಲ್ ಕೂಡಲೇ ಕುಸಿದು ಬಿದ್ದ ವರ ಶಿವಕುಮಾರ್ಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದರು. ಸದ್ಯ ಶಿವಕುಮಾರ್ ಚೇತರಿಸಿಕೊಂಡಿದ್ದಾರೆ.
ವಿವಿಧ ಜಾತಿ ಧರ್ಮಕ್ಕೆ ಸೇರಿದ ಜೋಡಿಗಳ ಮದುವೆಯನ್ನ ಸರಳ ಹಾಗೂ ಸುಂದರವಾಗಿ ಆಯೋಜಿಸಲಾಗಿತ್ತು. ಸಾಮೂಹಿಕ ವಿವಾಹದಲ್ಲಿ ನವದಾಂಪತ್ಯಕ್ಕೆ ಕಾಲಿಟ್ಟ ಜೋಡಿಗೆ ಸರ್ಕಾರದ ಅನುದಾನ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರಾಯಚೂರಿನ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ, ಮಾಜಿ ಶಾಸಕ ಎ.ಪಾಪಾರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.