ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ (Narendra Modi) ಫೋಟೊ ಇರುವ ಪೋಸ್ಟರ್ ಹಿಡಿಯಲು ಗ್ರಾಪಂ ಅಧ್ಯಕ್ಷೆ ತಿರಸ್ಕರಿಸಿದ ಘಟನೆ ಕೊಪ್ಪಳ (Koppal) ಜಿಲ್ಲೆ ಕುಕನೂರು ತಾಲೂಕು ಕುದುರಿಮೋತಿ ಗ್ರಾಮದಲ್ಲಿ ನಡೆದಿದೆ.
ಕಳೆದ 15 ದಿನದ ಹಿಂದೆ ಘಟನೆ ನಡೆದಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿದಾಡುತ್ತಿದೆ. ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಫರೀದಾ ಬೇಗಂ ಪೋಸ್ಟರ್ ಹಿಡಿಯಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕೆ ಬಾಂಬ್ ಬೆದರಿಕೆ – ಇಬ್ಬರ ಬಂಧನ
ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ನಲ್ಲಿ ವೀಡಿಯೋ ಮಾಡಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆಯ ಈ ನಡೆಯನ್ನು ಬಿಜೆಪಿ ವ್ಯಾಪಕವಾಗಿ ಖಂಡಿಸಿದೆ. ಗ್ರಾಮ ಪಂಚಾಯತ್ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರೂ ಪೋಸ್ಟರ್ ಹಿಡಿದು ಜನರಿಗೆ ಮಾಹಿತಿ ನೀಡುತ್ತಿದ್ದಾರೆ. ಆದರೆ ಗ್ರಾಪಂ ಅಧ್ಯಕ್ಷೆ ಮಾತ್ರ ತಮ್ಮ ಪಾಡಿಗೆ ತಾವು ಕುಳಿತಿದ್ದು, ಆಯೋಜಕರು ಪೋಸ್ಟರ್ ಹಿಡಿಯುವಂತೆ ಮನವಿ ಮಾಡಿದಾಗಲೂ ತಿರಸ್ಕಾರ ಮಾಡಿದ್ದಾರೆ.
ಕೈಗೆ ಪೋಸ್ಟರ್ ಕೊಡಲು ಬಂದರೂ ಪದೇ ಪದೆ ನಿರಾಕರಿಸಿದ್ದು, ವೀಡಿಯೋದಲ್ಲಿ ಸೆರೆಯಾಗಿದೆ. ಇದು ಸರ್ಕಾರಿ ಕಾರ್ಯಕ್ರಮ ಆಗಿದ್ದು, ಪಕ್ಷಾತೀತವಾಗಿ ಭಾಗವಹಿಸಬೇಕು ಎಂದು ಅಧ್ಯಕ್ಷೆಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ನಾನೂ ಕರಸೇವಕ, ನನ್ನನ್ನೂ ಬಂಧಿಸಿ – ಅಭಿಯಾನ ಆರಂಭಿಸಿದ್ದ ಸುನಿಲ್ ಕುಮಾರ್ ವಶಕ್ಕೆ