ಬಾಗಲಕೋಟೆ: ಕಾಂಗ್ರೆಸ್ನಲ್ಲಿ (Congress) ಲಿಂಗಾಯತರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಗೌಪ್ಯ ಸಭೆಗಳಿರಲಿ, ಲಿಂಗಾಯತರಿಗೆ ಊಟ, ಉಪಾಹಾರದ ಸಭೆಗಳಿಗೂ ಕರೆಯುತ್ತಿಲ್ಲ. ಪಕ್ಷದಲ್ಲಿ ಲಿಂಗಾಯತ ನಾಯಕರು (Lingayat Leaders) ಅಲೆಮಾರಿಗಳಾಗಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆಕ್ರೋಶ ಹೊರಹಾಕಿದ್ದಾರೆ.
ಬಾಗಲಕೋಟೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ಲಿಂಗಾಯತರಿಗೆ ಅನ್ಯಾಯ ಮಾಡಿದ್ದಾರೆಂದು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ನವರು ಆರೋಪ ಮಾಡಿದ್ದರು. ಜನರಿಗೆ ಸುಳ್ಳು ಹೇಳಿ ಮತಬ್ಯಾಂಕ್ ಮಾಡಿಕೊಂಡು ಅಧಿಕಾರಕ್ಕೆ ಬಂದರು. ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರ ಪರಿಸ್ಥಿತಿ ಏನಾಗಿದೆ? ಎಂಬುದನ್ನು ಸಿದ್ದರಾಮಯ್ಯ (Siddaramaiah) ಅವರೇ ಹೇಳಬೇಕು. ಗುಪ್ತ ಸಮಾಲೋಚನೆಗಳಿಗೆ ಕರೆಯದೇ ಇದ್ದರೂ ಬಹಿರಂಗವಾಗಿ ಊಟಕ್ಕೆ, ತಿಂಡಿಗಾದರೂ ಕರೆದು ಗೌರವ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಯಾವ ಉದಾಹರಣೆಯೂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಾಣಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಮಕ್ಕಳಿಂದ ಮಹಿಳೆ ಮೇಲೆ ಹಲ್ಲೆ
ದಲಿತರಿಗೂ ಅನ್ಯಾಯ ಅಗಿದೆ:
ಗೃಹ ಸಚಿವ ಜಿ.ಪರಮೇಶ್ವರ್ ಅವರ ಮನೆಯಲ್ಲಿ ಊಟಕ್ಕೆ ಕರೆದ್ರು, ಅಲ್ಲಿಯೂ ಲಿಂಗಾಯತರಿಗೆ ಒಬ್ಬರಿಗೂ ಕರೆಯಲಿಲ್ಲ. ಸಿದ್ದರಾಮಯ್ಯ ಮನೆಯಲ್ಲಿ ಉಪಹಾರಕ್ಕೆ ಕರೆದಾಗಲೂ ಲಿಂಗಾಯತ ಸಮುದಾಯದ ಒಬ್ಬ ನಾಯಕನನ್ನ ಕರೆಯಲಿಲ್ಲ. ಕಾಂಗ್ರೆಸ್ನಲ್ಲಿ 38 ಮಂದಿ ಲಿಂಗಾಯತ ಶಾಸಕರು, 7 ಮಂದಿ ಲಿಂಗಾಯತ ಸಚಿವರಿದ್ದಾರೆ. ಆದ್ರೂ ಅವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಅಧಿಕಾರ ಹಂಚಿಕೆಯಲ್ಲೂ ಲಿಂಗಾಯತರಿಗೆ ಮತ್ತು ದಲಿತರಿಗೆ ಅನ್ಯಾಯ ಆಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮಂಗಳೂರು, ಕಾರವಾರದಲ್ಲಿ ಬಂದರು ನಿರ್ಮಾಣ – 13 ಐಲ್ಯಾಂಡ್ ಅಭಿವೃದ್ಧಿ: ಮಂಕಾಳ್ ವೈದ್ಯ
ವಿಷ ಹಾಕಿ ಸಾಯಿಸಲ್ಲ:
ಬಿಜೆಪಿ ಯಿಂದ ಕಾಂಗ್ರೆಸ್ ನಾಯಕರನ್ನ ಸೆಳೆಯವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನವರೇ ಬಂಡೆದ್ದು, ಸಿಎಂಗೆ 41 ಜನ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ನಯಾ ಪೈಸೆ ಹಣ ಕೊಟ್ಟಿಲ್ಲ ಹಾಗೂ ನಮ್ಮ ಕೆಲಸ ಕಾರ್ಯಗಳು ಆಗ್ತಿಲ್ಲ. ಮಂತ್ರಿಗಳು ನಾವು ಶಿಫಾರಸ್ಸು ಮಾಡಿದ ಅಧಿಕಾರಿಯನ್ನ ವರ್ಗಾವಣೆ ಮಾಡದೇ ಅವ್ರೇ ದುಡ್ಡು ತಗೊಂಡು ವರ್ಗಾವಣೆ ಮಾಡ್ತಿದ್ದಾರೆ. ಮಂತ್ರಿಗಳೇ ದೊಡ್ಡ ಬಿಸಿನೆಸ್ ಮಾಡಿಕೊಂಡಿದ್ದಾರೆ ಎಂದು ಸಿಎಂಗೆ ಪತ್ರ ಬರೆದಿದ್ದಾರೆ. ನಾವು ಅವರನ್ನು ಪಕ್ಷಕ್ಕೆ ಸೆಳೆಯಲ್ಲ, ಆ ಪಾಪದ ಕೆಲಸ ನಾವು ಮಾಡಲ್ಲ. ಹಾಲು ಕುಡಿದು ಸಾಯುವವರಿಗೆ, ವಿಷ ಹಾಕಿ ಸಾಯಿಸಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಅತ್ಯುತ್ತಮ ನಾಯಕ – ಹಾಡಿ ಹೊಗಳಿದ ಅಮೆರಿಕ ಗಾಯಕಿ