ಬೆಂಗಳೂರು: ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯಾದ ಕಾರಣ ಇಂಧನ ದರ ಪ್ರತಿ ದಿನ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಕಚ್ಚಾ ತೈಲವನ್ನು ಭೂಗತ ತೈಲ ಸಂಗ್ರಹಗಾರಗಳಿಂದ ರಾಜ್ಯ ತೈಲ ಶುದ್ಧೀಕರಣ ಘಟಕಗಳಿಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.
“ನಾವು ತೈಲ ಮಾರುಕಟ್ಟೆ ಕಂಪನಿಗಳಿಗೆ ಮಾರಾಟ ಮಾಡಲು ಆರಂಭಿಸಿದ್ದೇವೆ ಎಂದು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್ಪಿಆರ್ಎಲ್) ಸಿಇಒ ಎಚ್ಪಿಎಸ್ ಅಹುಜಾ ಹೇಳಿದ್ದಾರೆ.
ಕಳೆದ ವರ್ಷ ಕೋವಿಡ್ 19 ಹಿನ್ನೆಲೆಯಲ್ಲಿ ತೈಲ ಬೆಲೆ ಭಾರೀ ಕುಸಿತ ಕಂಡಿತ್ತು. ಈ ವೇಳೆ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ 0.3 ದಶಲಕ್ಷ ಟನ್ ಕಚ್ಚಾ ತೈಲ ಖರೀದಿಸಿ ಮಂಗಳೂರು ತೈಲ ಸಂಗ್ರಾಹಗಾರದಲ್ಲಿಟ್ಟಿತ್ತು. ಇದೀಗ ಈ ಕಚ್ಚಾ ತೈಲವನ್ನು ರಾಜ್ಯ ಮಾಲೀಕತ್ವದ ಮಂಗಳೂರು ತೈಲ ಶುದ್ಧೀಕರಣ ಘಟಕಕ್ಕೆ ಮಾರಾಟ ಮಾಡಿದೆ. ಈ ಮೂಲಕ ದೇಶದಲ್ಲಿ ತೈಲ ಬೆಲೆ ಏರಿಕೆಯಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ಸರ್ಕಾರ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಇದನ್ನೂ ಓದಿ: ವಿಮಾನದ ಇಂಧನಕ್ಕಿಂತಲೂ ದುಬಾರಿ ಆಯ್ತು ಪೆಟ್ರೋಲ್ ಬೆಲೆ
ಮಂಗಳೂರು ಕಚ್ಚಾ ತೈಲ ಸಂಗ್ರಹಾಗಾರ ಸುಮಾರು 1.5 ದಶಲಕ್ಷ ಟನ್ ಟನ್ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಶೇ. ಅರ್ಧದಷ್ಟನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ತೈಲ ದರವನ್ನು ಸರಿದೂಗಿಸುವ ಕಾರ್ಯಕ್ಕೆ ಮುಂದಾಗುತ್ತಿದೆ.ಈ ವರ್ಷದ ಅಂತ್ಯಕ್ಕೆ 0.45 ದಶಲಕ್ಷ ಟನ್ ಮಾರಾಟ ಮಾಡಲು ಐಎಸ್ಪಿಆರ್ಎಲ್ ಮುಂದಾಗಿದೆ.
ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 36 ಪೈಸೆ ಏರಿಕೆ ಕಂಡು 110.61 ರೂ., ಡೀಸೆಲ್ 37 ಪೈಸೆ ಏರಿಕೆ ಕಂಡು 101.49 ರೂ. ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 35 ಪೈಸೆ ಏರಿಕೆ ಕಂಡು ಲೀಟರ್ ಗೆ 106.89 ರೂ. ಆದರೆ ಡೀಸೆಲ್ಗೆ 35 ಪೈಸೆ ಏರಿಕೆ ಕಂಡು 95.62 ರೂ. ದಾಖಲಾಗಿದೆ. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ
ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್ಪಿಆರ್ ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ.
ಮೂರು ತೈಲ ಸಂಗ್ರಹಗಾರಗಳ ಪೈಕಿ ಪಾದೂರಿನಲ್ಲಿ ಅತಿ ಹೆಚ್ಚು ತೈಲವನ್ನು ಸಂಗ್ರಹ ಮಾಡಬಹುದಾಗಿದೆ. ಪಾದೂರಿನಲ್ಲಿ 2.5 ದಶಲಕ್ಷ ಟನ್(17 ದಶಲಕ್ಷ ಬ್ಯಾರೆಲ್), ಮಂಗಳೂರಿನಲ್ಲಿ 1.5 ದಶಲಕ್ಷ ಟನ್, ವಿಶಾಖಪಟ್ಟಣದಲ್ಲಿ 1.33 ದಶಲಕ್ಷ ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ತೈಲ ಸಂಗ್ರಹಿಸಲಿದೆ ಸೌದಿ ಅರಾಮ್ಕೊ
ಶೇ.83ರಷ್ಟು ತೈಲವನ್ನು ಭಾರತ ಆಮದು ಮಾಡುತ್ತಿದೆ. 65 ದಿನಗಳಿಗೆ ಆಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ರಿಫೈನರಿಗಳಿಗೆ ಇದೆ. 90 ದಿನಗಳ ಬಳಕೆಗೆ ಆಗುವಷ್ಟು ತೈಲ ಸಂಗ್ರಹಿಸುವ ನಿಟ್ಟಿನಲ್ಲಿ ಐಎಸ್ಪಿಆರ್ಎಲ್ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಅಮೆರಿಕದ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಲಿದೆ ಭಾರತದ ಕಚ್ಚಾ ತೈಲ
ವಿಶ್ವದಲ್ಲೇ ತುರ್ತು ಸಂದರ್ಭಕ್ಕೆಂದು ತೈಲ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿರುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 714 ದಶಲಕ್ಷ ಬ್ಯಾರೆಲ್ ತೈಲವನ್ನು ಸಂಗ್ರಹ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಭಾರತ 5.33 ದಶಲಕ್ಷ ಟನ್( 38 ದಶಲಕ್ಷ ಬ್ಯಾರೆಲ್) ತೈಲವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ತೈಲವನ್ನು ತುರ್ತು ಸಂದರ್ಭದಲ್ಲಿ 9 ದಿನಗಳ ಕಾಲ ಬಳಸಬಹುದು. ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ(ಐಇಎ) ತನ್ನ ಸದಸ್ಯ ರಾಷ್ಟ್ರಗಳು 90 ದಿನಗಳ ಕಾಲ ತೈಲ ಸಂಗ್ರಹವನ್ನು ಹೊಂದಿರಬೇಕೆಂದು ಹೇಳಿದೆ.