ಬೆಂಗಳೂರು: ನಗರದ ಚಿಕ್ಕಗೊಲ್ಲರಹಟ್ಟಿಯ ನಿಶಾಂತ್ ಮೋಲ್ಡಿಂಗ್ಸ್ ಗೋಡಾನ್ ನಲ್ಲಿ ಭಾರೀ ಆಗ್ನಿ ಅವಘಡ ಸಂಭವಿಸಿದೆ.
ಅದೃಷ್ಟವಶಾತ್ ಗೋಡಾನ್ನಲ್ಲಿದ್ದ ನಾಲ್ವರು ಕಾರ್ಮಿಕರು ಬಚಾವ್ ಆಗಿದ್ದಾರೆ. ಅವರನ್ನು ತಕ್ಷಣ ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಎಕರೆಯ ಈ ಗೋಡಾನ್ ನಲ್ಲಿ ವೇಸ್ಟೇಜ್ ವಸ್ತುಗಳಿಂದ ರಸಗೊಬ್ಬರ ತಯಾರಿಸಲಾಗುತ್ತಿತ್ತು. ಥಂಬಿಂಗ್ ಮಿಷನ್ ಸ್ಫೋಟಗೊಂಡಿರುವುದೇ ಈ ಅಗ್ನಿ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಬೆಂಕಿ ಹೊತ್ತಿಕೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ 11 ಅಗ್ನಿಶಾಮಕ ವಾಹನಗಳು ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಸತತ ಎಂಟು ಗಂಟೆಗಳಿಂದ ಗೋಡಾನ್ ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಿಗೆಗೆ ಒಂದು ಕಿ.ಮೀವರೆಗೂ ದಟ್ಟ ಹೊಗೆ ಹರಡಿದೆ.
ಗೋಡಾನ್ನಲ್ಲಿ ಕೆಮಿಕಲ್ ಡ್ರಮ್ಗಳು ಸ್ಫೋಟಗೊಳ್ಳುತ್ತಿರುವುದರಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಅಡಚಣೆಯಾಗಿತ್ತು. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.