ಲಕ್ನೋ: ನಿಮ್ಮ ಮಗಳನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಕ್ಕೆ ತಂದೆಯೊಬ್ಬ ಯುವಕನಿಗೆ ಬೆಂಕಿ ಹಚ್ಚಿದ ಪ್ರಕರಣವೊಂದು ಬುಧವಾರ ಉತ್ತರ ಪ್ರದೇಶದ ಇತಾ ಜಿಲ್ಲೆಯಲ್ಲಿ ನಡೆದಿದೆ.
ನರೇಂದ್ರ ಶಾಕ್ಯಾ(22) ಸಾವು ಬದುಕಿನ ನಡುವೆ ಹೋರಾಡುತ್ತಿರುವ ಯುವಕ. ನರೇಂದ್ರ ದಲ್ಹಾಯಿ ಗ್ರಾಮದ ನಿವಾಸಿಯಾಗಿದ್ದು, ಗೇವಾ ಅಸದುಲ್ಲಾಪುರ ಗ್ರಾಮದಲ್ಲಿರುವ ತನ್ನ ಪ್ರೇಯಸಿಯ ಮನೆಗೆ ಹೋಗಿ ಆಕೆಯ ತಂದೆ ಜೊತೆ ಮದುವೆಯ ಪ್ರಸ್ತಾಪ ಮಾಡಿದ್ದಾನೆ.
ನರೇಂದ್ರ ಯುವತಿಯ ಮನೆಗೆ ಹೋಗುತ್ತಿದ್ದಂತೆ ಆತನನ್ನು ಮಂಚಕ್ಕೆ ಕಟ್ಟಿ ಹಾಕಿದ್ದಾರೆ. ನಂತರ ಯುವತಿಯ ತಂದೆ ಹಾಗೂ ಆಕೆಯ ಸಂಬಂಧಿಕರಾದ ದಯಾರಮ್ ಹಾಗೂ ಉಮೇಶ್ ನರೇಂದ್ರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಅಲ್ಲಿದ್ದ ಜನರು ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಯುವತಿಯ ತಂದೆ ಹಾಗೂ ಸಂಬಂಧಿ ದಯಾರಾಮ್ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಸಂಬಂಧಿ ಉಮೇಶ್ ತಪ್ಪಿಸಿಕೊಂಡಿದ್ದು ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ.
ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307, 342 ಹಾಗೂ 326 ಅಡಿಯಲ್ಲಿ ಕೇಸ್ ದಾಖಲಾಗಿದೆ. ನರೇಂದ್ರ ಹಾಗೂ ಯುವತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರು ಮದುವೆಯಾಗಲು ಕೂಡ ಇಚ್ಛಿಸಿದ್ದರು. ಆದರೆ ಯುವತಿ ಮನೆಯವರು ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv