ದಾವಣಗೆರೆ: ಪ್ರಿಯಕರನಿಗಾಗಿ ಯುವತಿಯೊಬ್ಬರು ಹಟ ಹಿಡಿದು ಕುಳಿತ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ತಿಪಟೂರು ಮೂಲದ ಯುವತಿ ಶೃತಿ ಹಾಗೂ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮೂಲದ ಯುವಕ ರಾಕೇಶ್ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ತಿಪಟೂರಿನಲ್ಲಿ ಬಿ.ಎಡ್ ಮಾಡುವಾಗ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಯುವಕ ದಾವಣಗೆರೆ ವಿವಿಯಲ್ಲಿ ವಿದ್ಯಾಭ್ಯಾಸ ಮಾಡಿದಾಗಿನಿಂದ ಯುವತಿಯನ್ನು ದೂರ ಮಾಡುತ್ತಾ ಬರುತ್ತಿದ್ದ. ಇದನ್ನು ಅರಿತ ಯುವತಿ ಯುವಕನಿಗಾಗಿ ದಾವಣಗೆರೆಗೆ ಬಂದು ಮದುವೆಯಾಗುವಂತೆ ಪಟ್ಟು ಹಿಡಿದಿದ್ದಾರೆ.
ನಾವು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ನನ್ನನ್ನು ಅವರು ಹೆಂಡತಿ ಎಂದು ಕರೆಯುತ್ತಿದ್ದರು. ಅವರನ್ನು ಗಂಡ ಎಂದೇ ತಿಳಿದುಕೊಂಡಿದ್ದೆ. ನಾವಿಬ್ಬರೂ ತಿಪಟೂರಿನಲ್ಲಿ ಬಿಎಡ್ ಮಾಡುವಾಗ ಟೀಚಿಂಗ್ ಪ್ರಾಕ್ಟೀಸ್ ಗೆಂದು ಹೋಗ್ತಾ ಇಬ್ಬರಿಗೂ ಲವ್ ಆಯ್ತು. ಬಿಎಡ್ ಕೋರ್ಸ್ ಮುಗಿದ ಬಳಿಕ ಅವರು ಊರಿಗೆ ಹೋದ್ರು. ಆದ್ರೂ ಎರಡು ತಿಂಗಳಿಗೊಮ್ಮೆ ಭೇಟಿ ಮಾಡುತ್ತಿದ್ವಿ. ಪ್ರತಿದಿನ 2 ಗಂಟೆ ಫೋನಿನಲ್ಲಿ ಮಾತನಾಡುತ್ತಿದ್ವಿ. ನಂತರ ಮೆಸೇಜ್ನಲ್ಲೇ ಕಾಲ ಕಳೆಯುತ್ತಿದ್ವಿ. ಇದೇ ನಮ್ಮ ಜಗತ್ತಾಗಿತ್ತು. ಈಗ ರಾಕೇಶ್, ನಮ್ಮ ಅಪ್ಪ ಅಮ್ಮ ಮದುವೆಗೆ ಒಪ್ಪುತ್ತಿಲ್ಲ. ನೀನು ಬೇರೆ ಜಾತಿಯವಳು. ಹೇಗೆ ನಿನ್ನನ್ನು ಮದುವೆಯಾಗ್ಲಿ. ಅಪ್ಪ ಅಮ್ಮನಿಗಾಗಿ ತ್ಯಾಗ ಮಾಡ್ತಿದ್ದೀನಿ ಅಂತಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಕರ್ನಾಟಕ ಯುವ ಶಕ್ತಿ ವೇದಿಕೆ ಕಾರ್ಯಕರ್ತರು ಯುವತಿಯ ಬೆಂಬಲಕ್ಕೆ ನಿಂತಿದ್ದಾರೆ.