ಮಂಗಳೂರು: ರಾಜ್ಯದ ಹೆಸರಾಂತ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಸರ್ಪ ಸಂಸ್ಕಾರ ಸೇವೆಗೆ ಭಕ್ತರಿಂದ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಈ ಕುರಿತು ಬಿಜೆಪಿ ಹಾಗೂ ಭಜರಂಗ ದಳ ಸಂಘಟನೆ ಪ್ರತಿಭಟನೆ ನಡೆಸಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುವ ಕೃಷ್ಣಮೂರ್ತಿ ಭಟ್ ಅವರ ರಾಜೀನಾಮೆಗೆ ಆಗ್ರಹಿಸಿದೆ.
ಏನಿದು ಆರೋಪ?
ಹಾಸನ ಮೂಲದ ಭಕ್ತರ ಗುಂಪು ಡಿಸೆಂಬರ್ 20 ರಂದು ಸರ್ಪ ಸಂಸ್ಕಾರ ಸೇವೆ ಮಾಡಿಸಿದ್ದರು. ಇವರಿಗೆ ಆನ್ ಲೈನ್ ನಲ್ಲಿ ಅವಕಾಶ ಸಿಗದ ಕಾರಣ, ದೇವಸ್ಥಾನದಲ್ಲಿ ಉದ್ಯೋಗದಲ್ಲಿರುವ ಹಾಸನ ಮೂಲದ ವ್ಯಕ್ತಿಯ ಹೆಸರಿನಲ್ಲಿ ಸೇವೆಯನ್ನು ಬುಕಿಂಗ್ ಮಾಡಲಾಗಿತ್ತು. ಹೆಸರಿನ ಮುಂಭಾಗ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ಹೆಸರನ್ನು ಶಿಫಾರಸು ಆಗಿ ನಮೂದಿಸಲಾಗಿತ್ತು. ಆದರೆ ಸೇವೆಯಾದ ಬಳಿಕ ಆ ಗುಂಪಿನಿಂದ ಕೃಷ್ಣಮೂರ್ತಿ ಭಟ್ ನಿಗದಿಗಿಂತ ಅಧಿಕ ಮೊತ್ತವನ್ನು ವಸೂಲು ಮಾಡಿದೆ ಎಂದು ಆರೋಪಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಕ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದಲ್ಲಿ ನಡೆಯುತ್ತಿರುವ ಅವ್ಯವಹಾರ ಆರೋಪ ಪ್ರಸ್ತುತ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್, ಬಿಜೆಪಿ ವಾಕ್ಸಮರಕ್ಕೆ ವೇದಿಕೆಯಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೃಷ್ಣಮೂರ್ತಿ ಅವರ ರಾಜೀನಾಮೆ ಪಡೆಯದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನಾಯಕರು ಎಚ್ಚರಿಕೆ ನೀಡಿದ್ದಾರೆ.