ಹುಬ್ಬಳ್ಳಿ: ಮಾಜಿ ಪ್ರಧಾನಿ ವಾಜಪೇಯಿ ಅವರು ಕರೆದು ನನಗೆ ರಾಜಕೀಯದಲ್ಲಿ ಒಂದು ಸ್ಥಾನಮಾನ ಕೊಟ್ಟರು. ಆದ್ರೆ ನಾನು ಅದನ್ನೂ ನಿರಾಕರಿಸಿದ್ದೆ. ಕಳೆದ ಬಾರಿ ಕೂಡಾ ನನಗೆ ಎಂಎಲ್ಸಿಗೆ ಟಿಕೆಟ್ ಕೊಟ್ಟಾಗ ಕೂಡಾ ನಾನೇ ಬೇಡವೆಂದಿದ್ದೆ ಅಂತ ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ ಸಂಕೇಶ್ವರ್ ಹೇಳಿದ್ದಾರೆ.
ನಗರದ ವಿಆರ್ ಎಲ್ ಸಂಸ್ಥೆಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ರಾಜ್ಯಸಭಾ ಟಿಕೆಟ್ ಕೊಡಿ ಎಂದು ಯಾರಲ್ಲೂ ಕೇಳಿಲ್ಲ. ಆದ್ರೆ ಬಿಎಸ್ವೈ ನನಗೆ ಟಿಕೆಟ್ ಕೊಡುವುದಾಗಿ ಹೇಳಿ ಕರೆ ಮಾಡಿದ್ದರು. ನಿಮ್ಮ ಟಿಕೆಟ್ ಶಾರ್ಟ್ ಲಿಸ್ಟ್ ಆಗಿದೆ. ಹೀಗಾಗಿ ನೀವು ತಯಾರಾಗಿ ಅಂತ ಜಗದೀಶ್ ಶೆಟ್ಟರ್ ಕರೆ ಮಾಡಿ ಹೇಳಿದ್ದರು ಎಂದು ತಿಳಿಸಿದರು.
ಕಳೆದ 56 ವರ್ಷದಿಂದ ನಾನು ಸಂಘ ಪರಿವಾರ ಬಿಜೆಪಿಯಲ್ಲಿ ಇದ್ದೇನೆ. ನಾನು ಹಿಂದೂವಾಗಿರುವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೋಗುತ್ತೆನೆ. ದೇವರಲ್ಲಿ ಎಂದೂ ನಾನೇನು ಕೇಳಿಲ್ಲ. ಹಾಗೆಯೇ ಪಕ್ಷದಿಂದ ಕೂಡ ಏನನ್ನೂ ಕೇಳಿಲ್ಲ. ನನ್ನ ಇತಿ ಮಿತಿಯಲ್ಲಿ ಕೆಲಸ ಮಾಡಿದ್ದೇನೆ. ನನ್ನ ಜೊತೆ ಹಲವಾರು ಜನ ಸಂಪರ್ಕದಲ್ಲಿ ಇದ್ದಾರೆ. ರಾಜೀವ್ ಚಂದ್ರಶೇಖರ್ ಒಬ್ಬ ಒಳ್ಳೆಯ ರಾಜಕಾರಣಿ. ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಕೆಲವರು ರಾಜೀವ್ ಚಂದ್ರಶೇಖರ್ ಕನ್ನಡಿಗ ವ್ಯಕ್ತಿಯಲ್ಲ ಎಂದಿದ್ದಾರೆ. ಆದ್ರೆ ಅವರು ಕನ್ನಡಿಗರಾಗಿದ್ದು ಅವರು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಎಂದರು.
ನನ್ನ ಉದ್ದೇಶ ದೇಶ ಮತ್ತು ರಾಜ್ಯದ ಕಾಂಗ್ರೆಸ್ ಮುಕ್ತ ಮಾಡುವುದು. ಬಿಜೆಪಿಯಿಂದ ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾ ಮುಂದೆ ಕೆಲಸ ಮಾಡುತ್ತೇನೆ. ಮುಖ್ಯಮಂತಿ ಸಿದ್ದರಾಮಯ್ಯನವರು ತಮ್ಮ ಪ್ರತಿ ಮಾತಿನಲ್ಲೂ ಬಿಜೆಪಿ ಅವರು ಜೈಲಿಗೆ ಹೋಗಿ ಬಂದವರು ಎನ್ನುತ್ತಾರೆ. ಇಂದಿರಾಗಾಂಧಿ ಕೂಡ ಜೈಲಿಗೆ ಹೋಗಿ ಬಂದವರು. ಇದನ್ನು ಕಾಂಗ್ರೆಸ್ ಮರೆಯಬಾರದು. ನಾನು ಬಿಎಸ್ವೈ ಅವರನ್ನು 30 ವರ್ಷದಿಂದ ನೋಡಿದ್ದು ಅವರು ಕ್ರಿಮಿನಲ್ ವ್ಯಕ್ತಿಯಲ್ಲ ಅವರು ವಿವರಿಸಿದರು.
ಮಹದಾಯಿ ಮತ್ತು ಕಳಸಾ ಬಂಡೂರಿ ವಿಚಾರದ ಕುರಿತು ಮಾತನಾಡಿದ ಅವರು, ದೇಶದ ಮತ್ತು ರಾಜ್ಯದ ಸಂಸ್ಕೃತಿಯ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಗೊತ್ತಿಲ್ವ. ಹೀಗಾಗಿ ಗೋವಾ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ರಾಜ್ಯಕ್ಕೆ ನೀರು ಬಿಡದಂತೆ ಹೇಳಿದ್ದಾರೆ. ಅವರ ತಪ್ಪಿನಿಂದ ಇಂದು ಈ ಸಮಸ್ಯೆ ದೊಡ್ಡದಾಗಿದೆ. ಮುಂದಿನ ದಿನಗಳಲ್ಲಿ ಮಹದಾಯಿ ಸಮಸ್ಯೆ ಬಗೆಹರಿಯತ್ತೆ. ಆ ನಂಬಿಕೆ ನಮಗಿದೆ ಎಂದರು.
ಲೋಕಾಯುಕ್ತರ ಚೂರಿ ಇರಿತ ವಿಚಾರ ಕೇಳಿ ನಮಗೆ ಬಹಳ ಬೇಜಾರಾಯ್ತು. ನಮ್ಮ ಕುಟುಂಬಕ್ಕೂ ಬೆದರಿಕೆಯಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಚೂರಿ ಹಾಕುವ ವಿಚಾರ ಲಕ್ಷಾಂತರ ಜನರ ತಲೆಯಲ್ಲಿದೆ. ರಾಜ್ಯ ಸರ್ಕಾರ ಐಪಿಎಸ್ ಆಧಿಕಾರಿಗಳನ್ನು ಫುಟ್ಬಾಲ್ ರೀತಿ ಆಡಿಸುತ್ತಿದೆ ಅಂತ ವಾಗ್ದಾಳಿ ನಡೆಸಿದ್ರು.
ಬಿಜೆಪಿಯನ್ನು ಕರ್ನಾಟಕದಲ್ಲಿ ಬೆಳೆಸಿದ ಧೀಮಂತ ನಾಯಕ ವೆಂಕಯ್ಯ ನಾಯ್ಡು. ಬಿಜೆಪಿ ನಮಗೆ ಕಲಿಸಿದ್ದು ಪಕ್ಷಸೇವೆ. ಭಾವನಾತ್ಮಕವಾಗಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹುನ್ನಾರ ನಡೆಸಿದೆ. ನಾನು ಲಿಂಗಾಯತ ಪ್ರಮುಖ ಮುಖಂಡ ಎಂದು ಎಲ್ಲೂ ಹೇಳಿಕೊಳ್ಳಲ್ಲ. ಸಿದ್ದರಾಮಯ್ಯ ಜಾತಿಯನ್ನು ಬಿಂಬಿಸುತ್ತಿದ್ದಾರೆ. ಶಶಿಕಲಾ ರೀತಿ ಇಂದಿರಾ ಗಾಂಧಿ ಕಂಬಿ ಎಣಿಸಿದ್ದರು. ಸಿದ್ದರಾಮಯ್ಯ ಅದನ್ನು ನೆನಪಿಸಿಕೊಳ್ಳಬೇಕು ಅಂತ ಅವರು ಹೇಳಿದ್ರು.