ನೆಲಮಂಗಲ: ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಸದ ಸಮಸ್ಯೆ ಎದುರಾಗಿದೆ.
ಹೌದು ಪಟ್ಟಣದಲ್ಲಿ ದಿನನಿತ್ಯದ ಕಸದ ರಾಶಿಯನ್ನ ಸಾಗಿಸುವ ಟ್ರಾಕ್ಟರ್ ಗಳಿಗೆ ಟಾರ್ಪಲ್ ಹೊದಿಸದೆ ಬೇಕಾಬಿಟ್ಟಿ ಸಂಚರಿಸುವುದರಿಂದ ಈ ಸಮಸ್ಯೆ ಎದುರಾಗಿದೆ. ದಿನನಿತ್ಯ ನೆಲಮಂಗಲದಿಂದ ಮೈಲನಹಳ್ಳಿವರಗೂ ಕಸ ಸಾಗಿಸುವ ಟ್ರಾಕ್ಟರ್ ಗಳಲ್ಲಿನ ಕಸ ರಸ್ತೆಯಲ್ಲೇ ಬೀಳುತ್ತಿದ್ದು, ರಸ್ತೆ ತುಂಬೆಲ್ಲಾ ಕಸಮಯವಾಗಿ ಬಿಟ್ಟಿದೆ.
ರಸ್ತೆಗಳಲ್ಲಿ ಬೀಳುತ್ತಿದ್ದ ಕಸವನ್ನು ನೋಡಿ ಬೇಸತ್ತ ನೆಲಮಂಗಲ ನಿವಾಸಿ ಮಾಜಿ ಸೈನಿಕ ಮೂರ್ತಿ ಅವರು ಕಸ ಸಾಗಿಸುತ್ತಿದ್ದ ಟ್ರಾಕ್ಟರ್ ಚಾಲಕನನ್ನ ಅಡ್ಡಗಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಆತನಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ತಿಳಿಸಿ, ಬುದ್ಧಿ ಮಾತನ್ನ ಹೇಳಿ ವಾರ್ನಿಂಗ್ ಮಾಡಿ ಕಳುಹಿಸಿದ್ದಾರೆ. ಜೊತೆಗೆ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಟ್ರಾಕ್ಟರ್ ಗಳು ಸಾಗುವಾಗ ಹಿಂಬದಿಯಲ್ಲಿ ವಾಹನ ಸವಾರ ಬಂದರಂತೂ ಅವರ ಮೇಲೆಲ್ಲಾ ಕಸ ಬಿದ್ದು, ಸಾಕಷ್ಟು ಸಮಸ್ಯೆ ಉಂಟು ಮಾಡುತ್ತಿದೆ. ಹಾಗೆಯೇ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರೆಲ್ಲರೂ ಮೂಗು ಮುಚ್ಚಿಕೊಂಡು ವಾಹನ ಚಲಾಯಿಸಬೇಕಾದ ದುಸ್ಥಿತಿ ಎದುರಾಗಿದೆ. ಈ ಕಸದ ಸಮಸ್ಯೆಯನ್ನು ಸರಿಯಾಗಿ ನಿರ್ವಹಣೆ ಮಾಡದ ನೆಲಮಂಗಲ ಪುರಸಭೆ ಅಧಿಕಾರಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರ ಕಿಡಿಕಾರಿದ್ದಾರೆ.