ಧಾರವಾಡ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಕೊನೆಗೂ ತಡರಾತ್ರಿ ಘೋಷಣೆಯಾಗಿದೆ.
ಮಂಗಳವಾರ ನಡೆದ ಮತದಾನದ ವೇಳೆ ಇವಿಎಂ ಮಷಿನ್ನಲ್ಲಿದ್ದ ಮತಗಳ ಹಾಗೂ ವಿವಿಪ್ಯಾಟ್ನಲ್ಲಿ ಬಿದ್ದಿದ್ದ ಮತಗಳ ಅಂತರ ಹೆಚ್ಚು ಕಡಿಮೆ ಕಂಡು ಬಂದಿತ್ತು. ಇದ್ರಿಂದ ಶೆಟ್ಟರ್ ಎದುರಾಳಿಯಾದ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ನಾಲವಾಡ ಚುನಾವಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರು.
ಈ ಹಿನ್ನೆಲೆ ಶಟ್ಟರ್ ಅವರ ಚುನಾವಣಾ ಗೆಲುವಿನ ಘೋಷಣೆಯನ್ನು ತಡೆ ಹಿಡಿದಿದ್ದ ಚುನಾವಣಾ ಆಯೋಗ, ತಡ ರಾತ್ರಿ ಜಗದೀಶ್ ಶೆಟ್ಟರ್ ಗೆಲುವು ಘೋಷಣೆ ಮಾಡಿದೆ. ಇನ್ನು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಮತ ಏಣಿಕೆ ಕೇಂದ್ರದ ಬಳಿ ಚುನಾವಣಾಧಿಕಾರಿ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿವಿಪ್ಯಾಟ್ನಲ್ಲಿ ಬಿದ್ದಿರುವ ಮತಗಳಿಗೆ ಹಾಗೂ ಇವಿಎಂನಲ್ಲಿ ಬಿದ್ದ ಮತಗಳಿಗೆ 59 ಮತ ಅಂತರವಿದೆ ಎಂದ ಮಹೇಶ್ ನಾಲವಾಡ, ಶೆಟ್ಟರ್ ಹಿಂಬಾಗಿಲಿನಿಂದ ಗೆಲುವು ಸಾಧಿಸಿದ್ದು, ಇದರ ವಿರುದ್ಧ ಹೋರಾಟ ಮಾಡುವ ಮಾತನ್ನ ಹೇಳಿದರು.
ಈ ಮೊದಲು ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಹಾಗೂ ಜೆಡಿಎಸ್ ಮುಖಂಡ ಎನ್.ಎಚ್ ಕೊನರಡ್ಡಿ ಕೂಡಾ ಮತ ಏಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಮರು ಮತದಾನಕ್ಕೆ ಆಗ್ರಹಿಸಿದ್ದರು. ಆದರೆ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ತಮ್ಮ ಕೈಯಲ್ಲಿದ್ದದ ಇಂಗ್ಲಿಷ್ ಪತ್ರದಲ್ಲಿದ್ದ ಘೋಷಣೆಯನ್ನ ತರಾತುರಿಯಲ್ಲಿ ಓದಿ ಶೆಟ್ಟರ್ ಗೆಲುವು ಎಂದು ಘೋಷಣೆ ಮಾಡಿದರು.
ಇನ್ನು ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಕೂಡ ನಡೆಯಿತು. ಇನ್ನು ಶೆಟ್ಟರ್ ಹಾಗೂ ಮಹೇಶ್ ನಾಲವಾಡ ನಡುವೆ ಗೆಲುವಿನ ಅಂತರ 21,270 ಮತಗಳಿದೆ. ಶಟ್ಟರ್ 75,591 ಮತ ಪಡೆದರೆ, ನಾಲವಾಡ 54,321 ಮತ ಪಡೆದಿದ್ದಾರೆ.