ಬೆಂಗಳೂರು: ಪಟಾಕಿಯೊಂದು ಸಿಡಿದ ಪರಿಣಾಮ ಫರ್ನೀಚರ್ ತುಂಬಿದ್ದ ಗೋದಾಮಿಗೆ ಬೆಂಕಿ ತಗುಲಿ, ಸಂಪೂರ್ಣ ಕಟ್ಟಡ ಹೊತ್ತಿ ಉರಿದ ಘಟನೆ ಆನೇಕಲ್ ತಾಲೂಕಿನ ಚಂದಾಪುರದ ಬನಹಳ್ಳಿಯಲ್ಲಿ ನಡೆದಿದೆ.
ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಸ್ಥಳೀಯರು ಹಚ್ಚಿದ್ದ ಪಟಾಕಿಯೊಂದು, ಫರ್ನೀಚರ್ ತುಂಬಿದ್ದ ಗೋದಾಮಿಗೆ ತಗುಲಿದೆ. ಪರಿಣಾಮ ಸಂಪೂರ್ಣ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಕಟ್ಟಡದಲ್ಲಿ ಮರದ ವಸ್ತುಗಳೇ ಹೆಚ್ಚಾಗಿ ಸಂಗ್ರಹಿಸಿದ್ದರಿಂದ ಅಗ್ನಿಯ ಕೆನ್ನಾಲಿಗೆ ತೀವ್ರತೆಯನ್ನು ಪಡೆದುಕೊಂಡಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ 2 ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ ರಾಕೆಟ್ ಪಟಾಕಿಯೊಂದು, ಗೋದಾಮಿನ ಮೇಲೆ ಸಂಗ್ರಹಿಸಿಟ್ಟಿದ್ದ ಸ್ಪಾಂಜ್ಗೆ ತಗುಲಿದ್ದರಿಂದ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ.
ಫರ್ನೀಚರ್ ಗೋದಾಮು ಕೇರಳ ಮೂಲದ ಶಾಜಿ ಎಂಬವರಿಗೆ ಸೇರಿದ್ದಾಗಿದೆ. ಘಟನೆ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv