ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ವಿರುದ್ಧ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಎಫ್ಐಆರ್ ದಾಖಲಿಸಲು ಮುಂದಾಗಿದೆ.
ಬಿಎಂಸಿ ಆರೋಗ್ಯ ಸಮಿತಿಯ ಅಧ್ಯಕ್ಷ ರಾಜುಲ್ ಪಟೇಲ್ ಅವರು ಆಲಿಯಾ ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಹಿನ್ನೆಲೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶಿಸಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಚೇಂಜ್ ಮಾಡಿದ ಕತ್ರಿನಾ
ಆಲಿಯಾ ಕೋವಿಡ್-19 ನೆಗೆಟಿವ್ ಆಗಿ ಬಂದಿದ್ದರೂ ಪಾಸಿಟಿವ್ ಬಂದ ಜನರ ಜೊತೆಗೆ ಸಂಪರ್ಕ ಇದ್ದ ಕಾರಣ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ಈ ನಿಯಮವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲು ಪಾಲಿಕೆ ಮುಂದಾಗಿದೆ.
ಈ ಕುರಿತು ಮಾತನಾಡಿದ ರಾಜುಲ್ ಪಾಟೇಲ್, ಹೋಮ್ ಐಸೋಲೇಶನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಲಿಯಾ ಭಟ್ ವಿರುದ್ಧ ಎಫ್ಐಆರ್ ದಾಖಲಿಸಲು ಸಾರ್ವಜನಿಕ ಆರೋಗ್ಯ ಇಲಾಖೆಯ ಉಪ ಮುನ್ಸಿಪಲ್ ಕಮಿಷನರ್ ಅವರಿಗೆ ನಾನು ಆದೇಶಿಸಿದ್ದೇನೆ. ಸಾಕಷ್ಟು ಜನರಿಗೆ ಮಾದರಿಯಾಗಿರುವ ಅವರು ಜವಾಬ್ದಾರಿಯಿಂದ ವರ್ತಿಸಬೇಕಿತ್ತು. ನಿಯಮಗಳು ಎಲ್ಲರಿಗೂ ಒಂದೇ ಎಂದು ಹೇಳಿದರು.
ಆಲಿಯಾ ಅವರು ತಮ್ಮ ಮುಂಬರುವ ‘ಬ್ರಹ್ಮಾಸ್ತ್ರ’ ಸಿನಿಮಾದ ಪ್ರಮೋಷನ್ ಮತ್ತು ಪೋಸ್ಟರ್ ಬಿಡುಗಡೆಗಾಗಿ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದರು. ಈ ವೇಳೆ ಬಿಎಂಸಿ ಆಲಿಯಾ ಅವರನ್ನು ಸಂಪರ್ಕಿಸಿ ದೆಹಲಿಯಲ್ಲೇ ಕ್ವಾರಂಟೈನ್ ಆಗುವಂತೆ ಸೂಚಿಸಿತ್ತು. ಆದರೆ ಸೂಚನೆಯನ್ನು ಧಿಕ್ಕರಿಸಿ ಈಗಲೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದನ್ನೂ ಓದಿ: ಬೋಲ್ಡ್ ದೃಶ್ಯಗಳೇ ಸಮಂತಾ ದಾಂಪತ್ಯಕ್ಕೆ ಮುಳುವಾಯ್ತು!
ಆಲಿಯಾ ಭಟ್ ಡಿಸೆಂಬರ್ 15 ರಂದು ರಣಬೀರ್ ಕಪೂರ್ ಜೊತೆಗೆ ದೆಹಲಿಗೆ ಭೇಟಿ ನೀಡಿದ್ದರು. ಇವರಿಬ್ಬರು ‘ಬ್ರಹ್ಮಾಸ್ತ್ರ’ ಚಿತ್ರದ ಪ್ರಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಕೂಡ ನಟಿಸಿದ್ದು, ಈ ಸಿನಿಮಾ ಮುಂದಿನ ವರ್ಷ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಲಿದೆ.
ಬಾಲಿವುಡ್ ತಾರೆಯರಿಗೆ ಕೋವಿಡ್-19 ಸೋಂಕು ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಈ ವಾರದ ಆರಂಭದಲ್ಲಿ ಅಮೃತಾ ಅರೋರಾ, ಮಹೀಪ್ ಕಪೂರ್, ಸೀಮಾ ಖಾನ್, ಕರೀನಾ ಕಪೂರ್ ಖಾನ್ ಅವರಿಗೆ ಪಾಸಿಟಿವ್ ಬಂದಿದೆ. ಈ ಹಿನ್ನೆಲೆ ಬಿಎಂಸಿ ಮುಂಬೈನ ಬಾಂದ್ರಾ ಮತ್ತು ಖಾರ್ ಪ್ರದೇಶಗಳಲ್ಲಿ ನಾಲ್ಕು ಕಟ್ಟಡಗಳನ್ನು ಸೀಲ್ ಮಾಡಿದ್ದು, ಈ ಪ್ರದೇಶಗಳಲ್ಲಿ ಕೋವಿಡ್-19 ಪರೀಕ್ಷಾ ಶಿಬಿರಗಳನ್ನು ಆಯೋಜಿಸಿದೆ.