ಬೆಂಗಳೂರು: ಕರ್ನಾಟಕದ ಜನರ ಮನಸ್ಸು ಗೆದ್ದಿರುವ ಹಾಗೂ ಚಿತ್ರದುರ್ಗ ಕೋಟೆಯಲ್ಲಿ ಕೋತಿಯಂತೆ ಲೀಲಾಜಾಲವಾಗಿ ಬಂಡೆಗಳನ್ನು ಏರುತ್ತಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅಪಾಯಕಾರಿ ಸಾಹಸಕ್ಕೆ ಮುಂದಾಗಿದ್ದಾರೆ. ಅದು ಮುಂದಿನ ವರ್ಷ ಫೆಬ್ರವರಿ 26-27 ನನ್ನ ಕೊನೆಯ ದಿನ ಎಂದು ಹೇಳಿ ಭಾವುಕರಾಗಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲದ ಖಾಸಗಿ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜ್ಯೋತಿರಾಜ್ ಸರ್ಕಾರದಿಂದ ಚಿತ್ರದುರ್ಗದ ಅಭಿವೃದ್ಧಿಗೆ ಯಾವುದೇ ಪ್ರಯೋಜನಗಳು ಆಗಿಲ್ಲ. ಆದ್ದರಿಂದ ನಾನು ಮುಂಬರುವ ಫೆಬ್ರವರಿಯ 26 ಮತ್ತು 27 ರಂದು ಜಗತ್ತಿನ ಅತಿ ಎತ್ತರದ ಅಮೆರಿಕದ 3,221 ಅಡಿ ಎತ್ತರದ ಏಂಜಲ್ ಫಾಲ್ಸ್ ಏರುತ್ತಿದ್ದು, ಅದರಲ್ಲಿ ಬರುವ ಹಣವನ್ನು ಕೋಟೆಯ ಅಭಿವೃದ್ಧಿಗೆ ಹಾಗೂ ನನ್ನ ಶಿಷ್ಯರ ಜೀವನೋಪಾಯಕ್ಕೆ ಬಳಕೆ ಮಾಡುವುದಾಗಿ ತಿಳಿಸಿದರು.
ಆ ದಿನ ನಾನು ಬದುಕುವುದು ಬಹಳ ಕಷ್ಟ ಹಾಗಾಗಿ ನಾನೊಂದು ವೇಳೆ ಸತ್ತರೆ, ಕನ್ನಡಿಗರೆಲ್ಲಾ ಒಂದು ಹಿಡಿ ಮಣ್ಣು ಹಾಕಿ. ಕಾರಣ ನಾನು ಸಂಪಾದನೆ ಮಾಡಿರುವುದು ಕನ್ನಡಿಗರ ಪ್ರೀತಿ ಮಾತ್ರ ಅಲ್ಲದೆ ಬೇರೇನೂ ಅಲ್ಲ. ಕನ್ನಡ ನಾಡಿಗಾಗಿ ಮಹಾನ್ ಸಾಧನೆ ಮಾಡಲು ಹೊರಟಿರುವೆ. ನನ್ನನ್ನು ಹರಸಿ ಆಶೀರ್ವದಿಸಿ ಎಂದು ಭಾವುಕರಾಗಿ ಕೋತಿರಾಜ್ ತಮ್ಮ ಮನದಾಳ ಮಾತನ್ನು ಹಂಚಿಕೊಂಡಿದ್ದಾರೆ.
ನೆಲಮಂಗಲದ ಖಾಸಗಿ ಶಾಲೆಯ ಪುಟಾಣಿ ಮಕ್ಕಳು ಚಿತ್ರದುರ್ಗದ ಕೋಟೆಯ ಗತವೈಭವವನ್ನು ತೋರುವ ಒನಕೆ ಓಬವ್ವಳ ಕಿಂಡಿ, ಬಂಧೀಖಾನೆ, ಏಳು ಸುತ್ತಿನ ಕೋಟೆ ದೇವಾಲಯಗಳನ್ನು ತದ್ರೂಪವನ್ನು ನೋಡಿ ಇನ್ನಷ್ಟು ಭಾವುಕರಾಗಿ ಮಕ್ಕಳ ಜೊತೆ ತಮ್ಮ ಅನುಭವವನ್ನು ಜ್ಯೋತಿರಾಜ್ ಹಂಚಿಕೊಂಡರು.