ದಾವಣಗೆರೆ: ಕಿಡ್ನಿ ಕೊಟ್ಟರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತೆ, ಬಡತನ ನಿವಾರಣೆ ಆಗತ್ತೆ ಅಂತ ಕಿಡ್ನಿ ಮಾರಿಕೊಂಡಿದ್ದ ವ್ಯಕ್ತಿಯೊಬ್ಬರು ಇದೀಗ ಬರಿಗೈಯಲ್ಲಿ ಆಕಾಶ ನೋಡುತ್ತಿದ್ದಾರೆ.
ದಾವಣಗೆರೆ ತಾಲೂಕಿನ ಆಲೂರು ಗ್ರಾಮದ ನಿವಾಸಿ ಚನ್ನಬಸಪ್ಪ ಮೋಸ ಹೋದ ವ್ಯಕ್ತಿ. ಒಂದು ವರ್ಷದ ಹಿಂದೆ ಚನ್ನಬಸಪ್ಪರ ದೊಡ್ಡಪ್ಪನ ಮಗ ಸಿದ್ದೇಶ್ ಎಂಬವರಿಗೆ ಕಿಡ್ನಿ ವೈಫಲ್ಯವಾಗಿತ್ತು. ಚನ್ನಬಸಪ್ಪರ ಬಡತನವನ್ನು ಆಧಾರವಾಗಿಟ್ಟಕೊಂಡು ಕಿಡ್ನಿ ಕೊಟ್ಟರೆ ನಿನಗೆ ಜಮೀನು ಹಾಗೂ ನಿನ್ನ ಮಕ್ಕಳನ್ನು ಚೆನ್ನಾಗಿ ಓದಿಸುತ್ತೇವೆ ಎನ್ನುವ ಅಮೀಷವನ್ನು ಇಟ್ಟಿದ್ದರು. ಹೀಗಾಗಿ ಮಕ್ಕಳ ಭವಿಷ್ಯಕ್ಕಾಗಿ ಒಪ್ಪಿಗೆ ನೀಡಿದ ಚನ್ನಬಸಪ್ಪ ತಮ್ಮ ಒಂದು ಕಿಡ್ನಿಯನ್ನು ನೀಡಿದ್ದರು.
ಆದರೆ ಕಿಡ್ನಿ ಪಡೆದ ಸಿದ್ದೇಶ್ ಕೆಲ ತಿಂಗಳು ಆರೋಗ್ಯವಾಗಿದ್ದು, ನಂತರ ಕಾರಣಾಂತರಗಳಿಂದ ಸಾವನ್ನಪ್ಪಿದ್ದಾರೆ. ಇತ್ತ ಹಣ ಜಮೀನು ನೀಡುತ್ತೇವೆ ಎಂದು ಹೇಳಿ ಕಿಡ್ನಿಯನ್ನು ಪಡೆದುಕೊಂಡ ಸಂಬಂಧಿಗಳು ಚನ್ನಬಸಪ್ಪ ಬದುಕ್ಕಿದ್ದಾನೋ ಇಲ್ಲವೋ ಎನ್ನುವುದನ್ನು ಸಹ ಕೇಳುತ್ತಿಲ್ಲ. ಕಿಡ್ನಿಯನ್ನು ನೀಡಿದ್ದ ಚನ್ನಬಸಪ್ಪ ಮಾತ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಒಂದು ಎಕರೆ ಹೊಲದಲ್ಲಿ ಸೊಪ್ಪು ತರಕಾರಿ ಬೆಳೆದು ಹಳ್ಳಿಗಳಿಗೆ ಹೋಗಿ ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ.