– ರೈಲು ದುರಂತಕ್ಕೆ ಸಿಲುಕಿದ್ದ ಮಗನಿಗಾಗಿ 230 ಕಿಮೀ ದೂರದಿಂದ ಬಂದ ಅಪ್ಪನ ನಂಬಿಕೆ ಹುಸಿಯಾಗಲಿಲ್ಲ
ಭುವನೇಶ್ವರ: ಒಡಿಶಾ ರೈಲು ಅಪಘಾತದಲ್ಲಿ (Odisha Train Accident) ಮೃತಪಟ್ಟಿದ್ದಾನೆಂದು ನೂರಾರು ಶವಗಳ ರಾಶಿಯಲ್ಲಿ ಇಟ್ಟಿದ್ದ ತನ್ನ ಮಗನನ್ನು ಜೀವಂತವಾಗಿ ಗುರುತಿಸಿ ತಂದೆ ಹೊರ ತೆಗೆಸಿರುವ ಅಚ್ಚರಿಯ ಘಟನೆ ನಡೆದಿದೆ.
ಹೆಲರಾಮ್ ಮಲಿಕ್ ಅವರು ತನ್ನ ಪುತ್ರ ಬಿಸ್ವಜಿತ್ ಬದುಕಿದ್ದಾನೆ ಎಂಬುದನ್ನು ಗುರುತಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಮಗನನ್ನು ವಾಪಸ್ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ
ರೈಲು ದುರಂತದಲ್ಲಿ ನಿಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಮಾತನ್ನು ಒಪ್ಪಲು ನಿರಾಕರಿಸಿದ ತಂದೆ ತನ್ನ ಮಗನಿಗಾಗಿ ಕೋಲ್ಕತ್ತಾದಿಂದ ಬಾಲಾಸೋರ್ಗೆ 230 ಕಿಮೀ ಪ್ರಯಾಣ ಮಾಡಿದ್ದರು.
ಶವಗಾರದಲ್ಲಿ ಶವಗಳ ಮಧ್ಯೆ ಇರಿಸಿದ್ದ ಮಗನನ್ನು ಗುರುತಿಸಿ ಆತ ಬದುಕಿರುವುದನ್ನು ಖಚಿತ ಪಡಿಸಿಕೊಂಡರು. ನಂತರ ಒಡಿಶಾದಿಂದ ಮನೆಗೆ ಕರೆತಂದ ನಂತರ, ಮಗನನ್ನು ಎಸ್ಎಸ್ಕೆಎಂ ಆಸ್ಪತ್ರೆಯ ಟ್ರಾಮಾ ಕೇರ್ ಘಟಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಗಂಭೀರ ಗಾಯಗಳ ಹೊರತಾಗಿಯೂ, ಬಿಸ್ವಜಿತ್ ಆರೋಗ್ಯ ಸ್ಥಿರವಾಗಿದೆ. ಇದನ್ನೂ ಓದಿ: 275 ಮಂದಿ ಸಾವನ್ನಪ್ಪಿದ ದುರಂತದ ಬೆನ್ನಲ್ಲೇ ಒಡಿಶಾದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು!
ಒಡಿಶಾದ ಬಾಲಾಸೋರ್ ಬಳಿ ಪ್ರಯಾಣಿಕರಿದ್ದ ಎರಡು ರೈಲು ಹಾಗೂ ಸರಕುಗಳಿದ್ದ ಒಂದು ರೈಲು ಅಪಘಾತಕ್ಕೀಡಾಗಿದ್ದವು. ಈ ಭೀಕರ ದುರಂತದಲ್ಲಿ ಸುಮಾರು 275 ಮಂದಿ ದುರ್ಮರಣಕ್ಕೀಡಾಗಿದ್ದಾರೆ. 1,100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೆಚ್ಚಿಬೀಳಿಸುವಂತಹ ದುರಂತಕ್ಕೆ ವಿಶ್ವಾದ್ಯಂತ ವಿಷಾದ ವ್ಯಕ್ತವಾಗಿತ್ತು. ಅಪಘಾತವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.