ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಾವಿರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಅನ್ನದಾತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಡಿಸಿದ್ದಾರೆ. ಪ್ರವೀಣ್ ಹತ್ಯೆ ಖಂಡಿಸಿ ಹಿಂದೂ ಸಂಘಟನೆ ಮಾಡಿದ್ರೆ, ಜಿಎಸ್ಟಿ ವಿರುದ್ಧ ಅನ್ನದಾತರು ಪ್ರತಿಭಟಿಸಿದ್ರು. ಇಂದು ಮಂಡ್ಯದಲ್ಲಿ ನಡೆದ ನಾಲ್ಕು ಪ್ರತಿಭಟನೆಯಿಂದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಕೂಡ ಆಗಿತ್ತು.
ಮಂಡ್ಯದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಮತ್ತು ಪಿಎಫ್ಐ ಹಾಗೂ ಎಸ್ಟಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 10 ಸಾವಿರಕ್ಕೂ ಅಧಕ ಮಂದಿ ಮಂಡ್ಯದ ಮಹಿಳಾ ಕಾಲೇಜಿನಿಂದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ಹೀಗಿದ್ದರೂ ಹಿಂದೂಗಳ ಕೊಲೆಯಾಗುತ್ತಿದೆ. ಹಿಂದೂಗಳ ರಕ್ಷಣೆ ನಮ್ಮ ಧ್ಯೇಯ ಎಂದು ಕೊಂಡು ಅಧಿಕಾರಕ್ಕೆ ಬಂದವರು ಇದೀಗ ಹತ್ಯೆಗಳಾದ್ರು ಇದೀಗ ಕಠಿಣ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಗಂಟೆಯಲ್ಲೇ ಪಿಎಫ್ಐ ಮತ್ತು ಎಸ್ಟಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡುತ್ತೇವೆ ಎಂದವರು ಇದೀಗ ತುಟಿ ಬಿಚ್ಚುತ್ತಿಲ್ಲ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ವಿರುದ್ಧ ಆಕ್ರೋಶ ವ್ಯಪಡಿಸಿದರು.
ಒಂದು ಕಡೆ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ರೆ ಮತ್ತೊಂದೆಡೆ ಕರ್ನಾಟಕ ರಾಜ್ಯ ರೈತ ಸಂಘಟವೂ ಸಹ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿತು. ಬೆಲ್ಲದ ಮೇಲಿನ ಜಿಎಸ್ಟಿ ವಾಪಸ್ ಪಡೆಯುವಂತೆ, ಕಬ್ಬಿಗೆ ಟನ್ಗೆ 4500 ರೂ ಬೆಲೆ ನಿಗಧಿ ಮಾಡುವಂತೆ, ಬೆಲ್ಲಕ್ಕೆ ವೈಜ್ಞಾನಿಕ ಬೆಲೆ ನಿಗಧಿಪಡಿಸಬೇಕು ಹಾಗೂ ಎಪಿಎಂಸಿಯನ್ನು ಪಾರದರ್ಶಕಗೊಳಿಸಬೇಕೆಂದು ಪ್ರತಿಭಟನೆ ನಡೆಸಿದರು. ಮಂಡ್ಯದ ಕಾಳಮ್ಮ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಎತ್ತಿನಗಾಡಿ, ಟ್ರಾಕ್ಟರ್ ಹಾಗೂ ಟಿಲ್ಲರ್ ಗಳ ಮೂಲಕ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ- ಪರಾರಿಯಾಗುವ ರಸ್ತೆ ಮಾರ್ಗ ಬದಲಿಸಲು ಹೇಳಿರುವ ರೌಡಿ ಸುಹಾಸ್
ಇತ್ತ ಸಿಐಟಿಯು ಸಂಘಟೆಯಿಂದ ಸಾವರಿರಾರು ಕಾರ್ಯಕರ್ತರು ಸಿಲ್ವರ್ ಜ್ಯೂಬಿಲಿ ಪಾರ್ಕ್ನಿಂದ ಡಿಸಿ ಆಫೀಸ್ ವರೆಗೆ ಕೂಲಿ ಕಾರ್ಯಕರ್ತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಇನ್ನೂ ಅಖಿಲ ಭಾರತ ವಿರಶೈವ ಲಿಂಗಾಯತ ಮಹಾಸಭಾದಿಂದ ವಿರಶೈವ ಲಿಂಗಾಯತ ಸಮೂದಾಯವನ್ನು ಓಬಿಸಿ ಪಟ್ಟಿಗೆ ಸೇರಿಸಬೇಕೆಂದು ಸಂಜಯ್ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಮಂಡ್ಯದಲ್ಲಿ ನಡೆದ ಈ ಸರಣಿ ಪ್ರತಿಭಟನೆಯಿಂದ ಮಂಡ್ಯ ನಗರದ ಜನರು ಪರದಾಡುವ ಸ್ಥಿತಿ ನಿರ್ಮಾಣವಾದ್ರೆ, ಇನ್ನೊಂದೆಡೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವ ಸ್ಥತಿ ನಿರ್ಮಾಣವಾಯಿತು.
ಒಟ್ಟಾರೆ ಮಂಡ್ಯ ಇಂದು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶದ ಸ್ವರೂಪದಲ್ಲಿ ನಡೆದ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಇತ್ತ ಈ ಪ್ರತಿಭಟನೆಗಳಿಂದ ಜನ ಸಾಮಾನ್ಯರು ಪರದಾಡಿದರು.