ಯಾದಗಿರಿ: ಮಗಳ ಮದುವೆಯ ಹಿಂದಿನ ದಿನವೇ ಸಾಲ ಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೀರೆವಡಗೇರಾ ಗ್ರಾಮದಲ್ಲಿ ನಡೆದಿದೆ.
ರೈತ ಭೀಮೇಶಪ್ಪ ಕರಿಕಳ್ಳಿ (50) ಆತ್ಮಹತ್ಯೆ ಮಾಡಿಕೊಂಡ ರೈತ. ಇಂದು ಭೀಮೇಶಪ್ಪ ಅವರ ಮಗಳ ಮದುವೆ ರಾಯಚೂರು ಜಿಲ್ಲೆಯಲ್ಲಿ ನಡೆಯಬೇಕಿತ್ತು. ಆದ್ರೆ ಮಗಳ ಮದುವೆ ಮುನ್ನವೇ ಗುರುವಾರದಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಒಂದು ಎಕರೆ ಹೊಲವಿದ್ದು ಎರಡು ಲಕ್ಷ ರೂಪಾಯಿ ಕೈ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.
ಗುರುವಾರ ಬೆಳಿಗ್ಗೆ ಮನೆಯಿಂದ ಹೊರಹೋದ ಭೀಮೇಶಪ್ಪ ಮನೆಗೆ ಬಾರದೆ ಇರುವುದರಿಂದ ಕುಟುಂಬದವರು ಹುಡುಕಲು ಆರಂಭಿಸಿದ್ದು, ಹೀರೆವಡಗೇರಾ ಹೊರವಲಯದ ಹೊಲವೊಂದರಲ್ಲಿ ಶವವಾಗಿ ಸಿಕ್ಕಿದ್ದಾರೆ.
ಭೀಮೇಶಪ್ಪ ಅವರಿಗೆ ಮೂರು ಜನ ಗಂಡು ಮಕ್ಕಳು, ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ. ಘಟನೆ ಸಂಬಂಧ ಹಿರೇವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.