ವಿಜಯಪುರ: ಕುಟುಂಬಕ್ಕೆ ಹಾಕಿರುವ ಬಹಿಷ್ಕಾರದಿಂದ ಮನನೊಂದ ಕುಟುಂಬವೊಂದು ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸುವ ವಿಷಯ ಇದೀಗ ಫೇಸ್ ಬುಕ್ ಮುಖಾಂತರ ಬೆಳಕಿಗೆ ಬಂದಿದೆ.
ವಿಜಯಪುರ ತಾಲೂಕಿನ ಹಂಚಿನಾಳ ತಾಂಡಾದ ನಿವಾಸಿಗಳಾದ ಚಂದು ಚವ್ಹಾಣ ಕುಟುಂಬ ಕಳೆದ 4 ವರ್ಷದಿಂದ ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗಿದೆ. ಗ್ರಾಮದಲ್ಲಿ ಯಾರೂ ಇವರನ್ನು ಮಾತನಾಡಿಸುವುದಿಲ್ಲ. ಅಂಗಡಿಗಳಲ್ಲಿ ಯಾವುದೇ ಸಾಮಾನುಗಳನ್ನು ಕೊಡುವುದಿಲ್ಲ. ಹೀಗೆ ನಾನಾ ರೀತಿಯ ಕಿರುಕುಳದಿಂದ ಚಂದು ಕುಟುಂಬ ಶೋಷಣೆಗೆ ಒಳಗಾಗಿದೆ.
ಈ ಕುರಿತು ಚಂದು ಕುಟುಂಬ ಅನೇಕ ಬಾರಿ ಜಿಲ್ಲಾಧಿಕಾರಿಯಿಂದ ಹಿಡಿದು ಸಿಎಂವರೆಗೂ ಮನವಿಗಳನ್ನು ನೀಡುತ್ತಲೇ ಬಂದಿದೆ. ಆದ್ರೆ ಯಾವುದೇ ಪ್ರಯೋಜನಾಗಿಲ್ಲ. ಇದರಿಂದ ಮನನೊಂದ ಚಂದು ಮಗಳು ಲಲಿತಾ, ಫೇಸ್ಬುಕ್ ನಲ್ಲಿ ತನ್ನ ನೋವನ್ನು ಹೇಳಿಕೊಂಡು ಸಮಸ್ಯೆ ಬಗೆಹರಿಯದಿದ್ದರೆ ಕುಟುಂಬದ ಎಲ್ಲಾ ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾಳೆ.
ಅಲ್ಲದೆ ನಮ್ಮ ಸಾವಿಗೆ ಸಚಿವ ಎಂ.ಬಿ ಪಾಟೀಲರೇ ಕಾರಣ ಎಂದು ಹೇಳಿದ್ದಾಳೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಇನ್ನು ಇವರ ಆಸ್ತಿ ಲಪಾಟಿಸಲು ಚಂದು ಚಿಕ್ಕಪ್ಪ ಪದ್ದು ಚವ್ಹಾಣ ತನ್ನ ಪ್ರಭಾವ ಬಳಸಿ ಬಹಿಷ್ಕಾರ ಹಾಕಿಸಿದ್ದಾನೆ ಅಂತ ಚಂದು ಆರೋಪಿಸಿದ್ದಾರೆ.