ದಾವಣಗೆರೆ: ಎರಡು ಕುಟುಂಬಗಳ ನಡುವೆ ಗಲಾಟೆಯಾಗಿ ರಾಡು ಹಾಗೂ ದೊಣ್ಣೆ ಹಿಡಿದು ಹೊಡೆದಾಡಿದಂತಹ ಘಟನೆ ಜಗಳೂರು ತಾಲೂಕಿನ ಕೊರಟಿಕೆರೆ ಗ್ರಾಮದಲ್ಲಿ ನಡೆದಿದೆ.
ಗಲಾಟೆಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಹೊಡೆದಾಡಿದ ಸನ್ನಿವೇಶವನ್ನು ಗ್ರಾಮಸ್ಥರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರಕಾಶ್, ನಾಗರಾಜ್, ಜಯಮ್ಮ, ಶಂಕರಮ್ಮ ಎಂಬವರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ತೀವ್ರ ಗಾಯಗೊಂಡಿದ್ದ ನಾಗರಾಜ್ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಮೂವರು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗ್ರಾಮದಲ್ಲಿ ಐದಾರು ವರ್ಷಗಳಿಂದ ಜಯಮ್ಮ ಮತ್ತು ಉಮೇಶ್ ಎಂಬವರ ಎರಡು ಕುಟುಂಬಗಳ ನಡುವೆ ಜಾಗವೊಂದರ ವಿಚಾರಕ್ಕೆ ಜಗಳ ನಡೆಯುತಿತ್ತು. ಆದರೆ ಭಾನುವಾರ ಜಯಮ್ಮನವರ ಜಾಗದಲ್ಲಿ ಉಮೇಶ್, ರವಿ, ಬಸವರಾಜಪ್ಪ ಮೆಕ್ಕೆಜೋಳ ತೆನೆ ಲೋಡ್ ಹಾಕಿದ್ದರು. ಇದನ್ನು ತೆಗೆಯುವಂತೆ ಮಾತಿನ ಚಕಮಕಿ ನಡೆದು ಹೊಡೆದಾಡುವ ಮಟ್ಟಕ್ಕೆ ತಲುಪಿದೆ.
ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.