– ಗ್ರಾಮಸ್ಥರ ವಿಶ್ವಾಸ ಗಳಿಸಿ ವಂಚನೆ
ಮಡಿಕೇರಿ: ತಾನು ಭಾರತೀಯ ನೌಕಾ ಪಡೆಯ ನಿವೃತ್ತ ಮೆಡಿಕಲ್ ಅಸಿಸ್ಟೆಂಟ್, ವೈದ್ಯ ಎಂದು ಕಳೆದ 2 ವರ್ಷಗಳಿಂದ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಾ, ಅವರ ಜೀವದೊಂದಿಗೆ ನಕಲಿ ವೈದ್ಯನೋರ್ವ ಆಟವಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಹೌದು. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಕ್ಕಬ್ಬೆಯಲ್ಲಿ ನಕಲಿ ವೈದ್ಯ ಕೃಷ್ಣ ರೋಗಿಗಳಿಗೆ ಮೋಸ ಮಾಡುತ್ತಿದ್ದಾನೆ. ಈ ಬಗ್ಗೆ ಕೃಷ್ಣನನ್ನೇ ಪ್ರಶ್ನಿಸಿದರೆ, ಭಾರತೀಯ ನೌಕಾ ಪಡೆಯ ನಿವೃತ್ತ ಮೆಡಿಕಲ್ ಅಸಿಸ್ಟೆಂಟ್. ಅಲ್ಲಿಯೂ ನಾನೇ ಎಲ್ಲಾ ಕೆಲಸ ಮಾಡುತ್ತಿದ್ದೆ. ಅಷ್ಟಕ್ಕೂ ನಾನು ಕುವೆಂಪು ಯುನಿವರ್ಸಿಟಿಯಲ್ಲಿ ಸೈಕೋಥೆರಪಿ ವಿಷಯದಲ್ಲಿ ಎಂಎಸ್ ಮಾಡಿದ್ದೇನೆ. ಅದರ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತಾನೆ ಈ ನಕಲಿ ವೈದ್ಯ. ಕೃಷ್ಣ ಕ್ಲಿನಿಕ್ ನಡೆಸಲು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಅನುಮತಿ ತೆಗೆದುಕೊಂಡಿಲ್ಲ. ಬದಲಿಗೆ ಪಂಚಾಯ್ತಿಯಿಂದ ಅನುಮತಿ ಪಡೆದು ಕ್ಲಿನಿಕ್ ನಡೆಸುತ್ತಿದ್ದಾನೆ ಎನ್ನಲಾಗಿದೆ.
ವಿಪರ್ಯಾಸವೆಂದರೆ ಮಡಿಕೇರಿಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲೇ ಈ ವೈದ್ಯ ಎರಡು ವರ್ಷಗಳಿಂದ ಹೀಗೆ ಚಿಕಿತ್ಸೆ ಕೊಡುತ್ತಿದ್ದರೂ ಈ ವಿಷಯ ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲ ಎನ್ನಲಾಗುತ್ತಿದೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಈ ನಕಲಿ ವೈದ್ಯ ಊರಿನವರ ಬಾರೀ ವಿಶ್ವಾಸ ಗಳಿಸಿದ್ದಾನೆ. ನಕಲಿ ವೈದ್ಯನ ಬಗ್ಗೆ ವರದಿ ಮಾಡಲು ಬಂದ ಮಾಧ್ಯಮದವರನ್ನು ಊರಿನ ಜನರು ಸುತ್ತುವರಿದು, ಇವರು ಇಲ್ಲಿನ ಸುತ್ತಮುತ್ತಲ ನಾಲ್ಕಾರು ಹಳ್ಳಿಗಳಿಗೆ ಇರುವ ಒಬ್ಬರೇ ವೈದ್ಯರು. ಹಗಲು ರಾತ್ರಿ ಎನ್ನದೆ ಯಾರಿಗಾದರೂ ಆರೋಗ್ಯದಲ್ಲಿ ವ್ಯತ್ಯಾಸವಾಯ್ತು ಎಂದರೆ ಮನೆಗೆ ಬಂದು ಚಿಕಿತ್ಸೆ ಕೊಡ್ತಾರೆ. ಹಾಗಿರುವಾಗ ಇವರ ಕ್ಲಿನಿಕ್ ಬಾಗಿಲು ಮುಚ್ಚಿಸೋಕೆ ಬಂದಿದ್ದೀರಾ? ಅದಕ್ಕೆ ನಾವು ಅವಕಾಶ ಕೊಡೋದಿಲ್ಲ. ಒಂದು ವೇಳೆ ಅವರಿಗೆ ಅನುಮತಿ ಇಲ್ಲಾ ಅಂದರೆ ಅಧಿಕಾರಿಗಳು ಅನುಮತಿ ಕೊಡ್ಲಿ ಅಷ್ಟೇ ಅಂತ ನಕಲಿ ವೈದ್ಯನ ಪರ ನಿಂತಿದ್ದಾರೆ.
ಕೆಲವರು ಯಾವುದೇ ದಾಖಲೆ ಇಲ್ಲದೆ, ವೈದ್ಯ ವೃತ್ತಿ ಮಾಡುತ್ತಿದ್ದಾನೆ. ಯಾರಿಗಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ಕೂಡಲೇ ಅಧಿಕಾರಿಗಳು ಪರಿಶೀಲನೆ ಮಾಡಿ ಅಂತ ಒತ್ತಾಯಿಸಿದರು. ಭಾರತೀಯ ನೌಕಾ ಸೇನೆಯ ಮೆಡಿಕಲ್ ಅಸಿಸ್ಟೆಂಟ್ ಆಗಿದ್ದ ಎನ್ನೋದನ್ನೇ ಬಳಸಿಕೊಂಡು ವೈದ್ಯ ವೃತ್ತಿ ಮಾಡುತ್ತಾ. ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿರುವ ಈ ವೈದ್ಯರ ಅಸಲಿಯತ್ತು ಏನು ಎನ್ನೋದನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಬೇಕಿದೆ.