ಕೊಲಂಬೊ: ಇಂಧನ ಕೊರತೆ ಹಿನ್ನೆಲೆಯಲ್ಲಿ ಶ್ರೀಲಂಕಾದ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಇಲ್ಲದೇ ವಾಹನಗಳು ಮನೆಗಳಲ್ಲಿ ನಿಂತಿವೆ. ದೇಶಾದ್ಯಂತ ಪೆಟ್ರೋಲ್ ಬಂಕ್ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಜನ ಸಾಕಾಗಿದ್ದಾರೆ. ಈ ಯಾವುದೇ ತಲೆನೋವು ಬೇಡ ಎಂದು ತೀರ್ಮಾನಿಸಿರುವ ಜನ ಈಗ ಬೈಸಿಕಲ್ಗಳತ್ತ ಮುಖ ಮಾಡಿದ್ದಾರೆ.
ಶ್ರೀಲಂಕಾ ಜನತೆ ತಮ್ಮ ದೈನಂದಿನ ಪ್ರಯಾಣಕ್ಕಾಗಿ ಸೈಕಲ್ಗಳ ಮೊರೆ ಹೋಗಿದ್ದಾರೆ. ಇಂಧನ ಕೊರತೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರುವುದರಿಂದ ಜನ ಸೈಕಲ್ಗಳನ್ನು ಕೊಳ್ಳಲು ಮುಗಿಬಿದ್ದಿದ್ದಾರೆ. ಈಗಾಗಲೇ ಅನೇಕ ಅಂಗಡಿಗಳಲ್ಲಿ ಸೈಕಲ್ ಸ್ಟಾಕ್ ಖಾಲಿಯಾಗಿದೆ. ಕಚೇರಿ ಮತ್ತು ಶಾಲಾ-ಕಾಲೇಜುಗಳಿಗೆ ಸೈಕಲ್ಗಳ ಮೂಲಕ ತೆರಳುತ್ತಿದ್ದಾರೆ. ಇದನ್ನೂ ಓದಿ: ಗೊಟಬಯ ರಾಜಪಕ್ಸೆ ಇನ್ನೂ ದೇಶದಲ್ಲಿಯೇ ಇದ್ದಾರೆ: ಮಹಿಂದಾ ಯಾಪಾ ಅಬೇವರ್ಧನ
ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಿಂದಾಗಿ ನಾವು ಸೈಕಲ್ ಬಳಸಲಾರಂಭಿಸಿದ್ದೇವೆ. ಪೆಟ್ರೋಲ್ ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ಸರತಿಯಲ್ಲಿ ನಿಲ್ಲಲು ನಮಗೆ ಸಮಯವಿಲ್ಲ. ಕೆಲವೊಮ್ಮೆ ಸರತಿಯಲ್ಲಿ ನಿಂತರೂ ನಮಗೆ ಸಿಗುತ್ತದೆ ಎಂಬ ಖಾತರಿಯನ್ನು ನೀಡುವುದಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಪೆಟ್ರೋಲ್ ಬೆಲೆ ಲೀಟರ್ಗೆ 470 ಶ್ರೀಲಂಕಾ ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್ಗೆ 460 ಶ್ರೀಲಂಕಾ ರೂಪಾಯಿಗೆ ಮಾರಾಟವಾಗುತ್ತಿದೆ. ದೇಶದಲ್ಲಿ ಸೈಕಲ್ ಬಳಕೆ ಪ್ರಮಾಣ ಶೇ.30ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಲಂಕಾ ಪ್ರತಿಭಟನೆ: ಪ್ರಧಾನಿಯ ಬೆಡ್ರೂಂನಲ್ಲಿ WWE ಪ್ರದರ್ಶನ
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ರಾಜಪಕ್ಸ ಮನೆತನದ ಆಡಳಿತದ ವಿರುದ್ಧ ರೊಚ್ಚಿಗೆದ್ದ ಜನ ಕಳೆದ ಮೂರು ದಿನಗಳ ಹಿಂದೆ ಗೊಟಬಯ ರಾಜಪಕ್ಸ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ.