ರಾಯಚೂರು: ಇಂದು ಅಥವಾ ನಾಳೆ ಇನ್ನೂ 7 ರಿಂದ 8 ಜನ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಮುಂಬೈನಲ್ಲಿರುವ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.
ಕಳೆದ ದಿನ ಅತೃಪ್ತ ಶಾಸಕರೊಂದಿಗೆ ರಾಜೀನಾಮೆ ನೀಡಿರುವ ಪ್ರತಾಪ್ಗೌಡ ಪಾಟೀಲ್, ಈಗ ರಾಜೀನಾಮೆ ಸರಣಿ ಮುಂದುವರಿಯಲಿದೆ ಅನ್ನೋದನ್ನ ತಿಳಿಸಿದ್ದಾರೆ. ಲಿಸ್ಟ್ ನಲ್ಲಿ ಯ್ಯಾರ್ಯಾರು ಇದ್ದಾರೆ ಗೊತ್ತಿಲ್ಲ ರಾಜೀನಾಮೆಯಂತೂ ಕೊಡುತ್ತಾರೆ. ಇಂದು ಭಾನುವಾರ ಸ್ಪೀಕರ್ ಸಿಗಲ್ಲ. ಹೀಗಾಗಿ ನಾಳೆ(ಸೋಮವಾರ) 7 ರಿಂದ 8 ಜನ ರಾಜೀನಾಮೆ ಕೊಡುವುದು ಪಕ್ಕಾ ಎಂದು ಹೇಳಿದ್ದಾರೆ.
ನಮ್ಮ ಕ್ಷೇತ್ರದಲ್ಲಿ ನಾವು ಎಷ್ಟೇ ಕೆಲಸ ಮಾಡಿದರೂ ಜನರ ಮನಸ್ಸು ಬಿಜೆಪಿ ಪರ ಇದೆ. ಲೋಕಸಭಾ ಚುನಾವಣೆಯಲ್ಲಿ ನಾವು ನೋಡಿದ್ದೀವಿ. ಜನರು ಒಟ್ಟಾಗಿರುವುದರಿಂದ ನಮ್ಮ ಮುಂದಿನ ಭವಿಷ್ಯದ ಪ್ರಶ್ನೆ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ರಾಜೀನಾಮೆ ಕೊಡಬೇಕಾಯಿತು. ರಾಜೀನಾಮೆ ಅಂಗೀಕಾರವಾದ ಮೇಲೆ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತೇವೆ ಎಂದು ಪ್ರತಾಪ್ಗೌಡ ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಬಂದ ಮೇಲೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಹಿರಿತನ ಗುರುತಿಸುವ ಕೆಲಸ ಆಗಲಿಲ್ಲ. ಮೂರು ಬಾರಿ ಶಾಸಕರಾಗಿದರೂ ಸಚಿವ ಸ್ಥಾನ ನೀಡುವಲ್ಲಿ ಅನ್ಯಾಯ ಮಾಡಿದರು. ಪಕ್ಷದ ಹಿರಿಯರು ಸಹ ನ್ಯಾಯ ಕೊಡಿಸುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಅವರು ರಾಜೀನಾಮೆಗೆ ಕಾರಣ ತಿಳಿಸಿದರು.
ಪಬ್ಲಿಕ್ ಟಿವಿ ವರದಿಗಾರನ ಜೊತೆ ಪಾಟೀಲ್ ಸಂಭಾಚಣೆ ಇಂತಿದೆ:
ವರದಿಗಾರ – ರಾಜಿನಾಮೆಗೆ ಮುಖ್ಯ ಕಾರಣವೇನು?
ಪ್ರತಾಪ ಗೌಡ ಪಾಟೀಲ್ – ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕೆಲಸ ಆಗುತ್ತಿಲ್ಲ. ಹಿರಿಯ ಶಾಸಕರಿಗೆ ಗೌರವ ಸಿಗುತ್ತಿಲ್ಲ. ಅಲ್ಲದೆ ಕ್ಷೇತ್ರದಲ್ಲಿ ನಾವು ಎಷ್ಟೇ ಕೆಲಸ ಮಾಡಿದರೂ ಜನರ ಮನಸ್ಸು ಬಿಜೆಪಿ ಪರ ಇದೆ. ಭವಿಷ್ಯದ ದೃಷ್ಟಿಯಿಂದ ನಾವು ಪಕ್ಷಕ್ಕೆ ರಾಜೀನಾಮೆ ನೀಡಬೇಕಾಗಿದೆ.
ವರದಿಗಾರ – ಸರ್, ಮುಂದೆ ನೀವು ಬಿಜೆಪಿಗೆ ಸೇರುತ್ತೀರಾ?
ಪ್ರತಾಪ ಗೌಡ ಪಾಟೀಲ್ – ರಾಜೀನಾಮೆ ಅಂಗೀಕಾರವಾದ ನಂತರ ಬಿಜೆಪಿ ಸೇರುತ್ತೇವೆ.
ವರದಿಗಾರ – ಇನ್ನೂ ಶಾಸಕರು ರಾಜೀನಾಮೆ ಕೊಡುತ್ತಾರಾ ಸರ್.
ಪ್ರತಾಪ ಗೌಡ ಪಾಟೀಲ್ – ಇನ್ನೂ 7-8 ಜನರು ರಾಜಿನಾಮೆ ನೀಡುತ್ತಾರೆ. ಅದು ಸಹ ಇಂದು ಅಥವಾ ನಾಳೆ ಆಗುತ್ತೆ.
ವರದಿಗಾರ – ಲೀಸ್ಟ್ ನಲ್ಲಿ ಯಾರ-ಯಾರ ಹೆಸರು ಇದೆ ಸರ್
ಪ್ರತಾಪ ಗೌಡ ಪಾಟೀಲ್ – ನನಗೆ ಗೊತ್ತಿಲ್ಲ, ರಾಜೀನಾಮೆ ನೀಡುವುದು ಖಚಿತ.