ಬೆಂಗಳೂರು: ಅಕ್ರಮ ಒತ್ತುವರಿ(Encroachment) ತೆರವಿಗೆ ಮುಂದಾದ ನೆಲಮಂಗಲ ತಹಶೀಲ್ದಾರ್ಗೆ (Nelamangala Tahsildar) ವಕೀಲೆಯೊಬ್ಬರು ಆವಾಜ್ ಹಾಕಿದ್ದಾರೆ.
ಡಾಬಸ್ ಪೇಟೆಯ ಸರ್ವೇ ನಂಬರ್ 91 ರಲ್ಲಿ ವಸೀಂ ಎಂಬುವರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಒಂದು ವಾರದ ಹಿಂದೆ ವಾಸೀಂ ಅವರಿಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ತಾಲೂಕು ಆಡಳಿತ ಸೂಚನೆ ನೀಡಿತ್ತು.
ಜಾಗ ತೆರವುಗೊಳಿಸದ ಹಿನ್ನೆಲೆಯಲ್ಲಿ ಇಂದು ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಂದನಹೊಸಹಳ್ಳಿ ಹಾಗೂ ಸೋಂಪುರ ಗಡಿ ಭಾಗಕ್ಕೆ ತಹಶೀಲ್ದಾರ್ ಮಂಜುನಾಥ್ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಇನ್ನೂ ಯಾಕೆ ಜಾಗವನ್ನು ತೆರವು ಮಾಡಿಲ್ಲ ಎಂದು ಕೇಳಿದ್ದಕ್ಕೆ ವಾಸೀಂ ಪರ ವಕೀಲೆ ಆಸ್ಮಾ ತಹಶೀಲ್ದಾರ್ ಮೇಲೆ ಏಕಾಏಕಿ, ನೀನು ಯಾವನೋ? ನಿನಗೆ ತೆರವುಗೊಳಿಸಲು ಅನುಮತಿ ಕೊಟ್ಟವರು ಯಾರು? Who the hell are you ಎಂದು ಆವಾಜ್ ಹಾಕಿದ್ದಾರೆ.
ವಕೀಲೆ ತಹಶೀಲ್ದಾರ್ಗೆ ಆವಾಜ್ ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಹಶೀಲ್ದಾರ್ ಮಂಜುನಾಥ್ ಅವರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಏಕವಚನದಲ್ಲಿ ನಿಂದನೆ ಮಾಡಿದ ಆರೋಪದಡಿ ವಕೀಲೆ ಆಸ್ಮಾ ವಿರುದ್ಧ ಡಾಬಸ್ ಪೇಟೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಒತ್ತುವರಿಯಾದ ಜಾಗದಲ್ಲಿ ಅನಧಿಕೃತ ಕಟ್ಟಡಗಳಿದ್ದರೂ ಯಾವುದೇ ಮುಲಾಜಿಗೆ ಒಳಗಾಗದೆ ತೆರವು ಗೊಳಿಸಲಾಗುವುದು. ಸೂಕ್ತ ಭದ್ರತೆ ಮೇರೆಗೆ ಈ ಕಾರ್ಯ ನಡೆಯಲಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ. ಈ ವೇಳೆ ಹೋಟೆಲ್ ನಿರ್ಮಿಸಿ ಬಾಡಿಗೆ ನೀಡಿರುವ ವಾಸೀಂಗೆ ಎರಡು ದಿನದಲ್ಲಿ ಹೋಟೆಲ್ ತೆರವುಗೊಳಿಸುವಂತೆ ಖಡಕ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ‘ಕಬ್ಬಿಣದ ಕಾಲುಗಳ ವ್ಯಕ್ತಿ’ ಭಾರತಕ್ಕೆ ಗರಬಡಿಸಿದ್ದಾನೆ: ಮೋದಿಯನ್ನು ವ್ಯಂಗ್ಯವಾಡಿದ ಕಾಂಗ್ರೆಸ್
ಆರೋಪ ಏನು?
ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಂದನಹೊಸಹಳ್ಳಿ ಹಾಗೂ ಸೋಂಪುರ ಗಡಿ ಭಾಗವಾಗಿರುವ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಸರ್ವೆ ನಂಬರ್ 91 ರಲ್ಲಿ 34 ಗುಂಟೆ ಸರ್ಕಾರಿ ಗುಂಡು ತೋಪು ಇತ್ತು. ಅದರಲ್ಲಿ 7 ಗುಂಟೆ ರಾಷ್ಟ್ರೀಯ ಹೆದ್ದಾರಿಗೆ ಹಂಚಿಕೆಯಾಗಿದ್ದು, 10 ಗುಂಟೆ ರೈತ ಸಂಪರ್ಕ ಕೇಂದ್ರಕ್ಕೆ ನೀಡಲಾಗಿದೆ.
5 ಗುಂಟೆ ಜಮೀನನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ BDCC ಬ್ಯಾಂಕಿಗೆ ಕಾಯ್ದಿರಿಸಲಾಗಿದೆ. ಇನ್ನುಳಿದ ಸರ್ಕಾರಿ ಗುಂಡು ತೋಪಿನ ಜಾಗದಲ್ಲಿ 2.08 ಗುಂಟೆ ಒತ್ತುವರಿ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇಲ್ಲಿನ ಪಕ್ಕದ ಜಮೀನು ಮಾಲೀಕ ವಾಸೀಂ ಒತ್ತುವರಿ ಮಾಡಿ ಹೋಟೆಲ್ ನಡೆಸಲು ಬಾಡಿಗೆ ನೀಡಿದ್ದಾರೆ ಎಂಬ ಆರೋಪ ಬಂದಿದೆ.