ಮೈಸೂರು: ಕಾಡನಿಂದ ನಾಡಿಗೆ ಬಂದಿರುವ ದಸರಾ ಗಜಪಡೆ ಈಗ ಫುಲ್ ರಿಲ್ಯಾಕ್ಸ್ ಮೂಡಿನಲ್ಲಿವೆ. ಕಾಡಿನಿಂದ ಬಂದಿರುವ ಅತಿಥಿಗಳಿಗೆ ನಾಡಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ. ಕಾಡಿನಲ್ಲಿ ಬೇಕಾದ್ದನ್ನು ತಿನ್ನುತ್ತಿದ್ದ ಗಜಪಡೆಗೆ ಇಲ್ಲಿ ಅತಿ ಪೌಷ್ಠಿಕವಾದ ಆಹಾರ ನೀಡಿ ಆರೈಕೆ ಮಾಡಲಾಗುತ್ತಿದೆ.
ದಸರೆಗಾಗಿ ಕಾಡನಿಂದ ಬಂದಿರುವ ದಸರಾ ಗಜಪಡೆ ಈಗ ಮೈಸೂರಿನ ಅಶೋಕ್ಪುರಂನಲ್ಲಿನ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಕ್ಯಾಪ್ಟನ್ ಅರ್ಜುನ, ಧನಂಜಯ, ಚೈತ್ರ, ಗೋಪಿ, ವಿಕ್ರಮ, ವರಲಕ್ಷ್ಮಿ ಆನೆಗಳು ಸಂಪೂರ್ಣವಾಗಿ ವಿಶ್ರಾಂತಿಯಲ್ಲಿವೆ. ಈ ಆನೆಗಳು ಮೊದಲ ತಂಡದಲ್ಲಿ ಮೈಸೂರಿಗೆ ಬಂದಿದ್ದು, ಎರಡನೇ ತಂಡದಲ್ಲಿ ಇನ್ನೂ ಆರು ಆನೆಗಳು ಮುಂದಿನ ವಾರ ಮೈಸೂರಿಗೆ ಬರಲಿವೆ. ಇದನ್ನೂ ಓದಿ: ನಾಡಹಬ್ಬಕ್ಕೆ ಸಿದ್ಧತೆ ಶುರು- 4,050 ಕೆ.ಜಿ ತೂಕದ ಧನಂಜಯನಿಗೆ ಮೊದ್ಲ ದಸರಾ
ಈಗ ಬಂದಿರುವ ಆನೆಗಳಿಗೆ ಭತ್ತ, ಹಸಿ ಹುಲ್ಲು, ಸೊಪ್ಪು, ಕಾಯಿ ಬೆಲ್ಲ ನೀಡಿ ಹಾರೈಕೆ ಮಾಡಲಾಗುತ್ತಿದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಹೀಗೆ ನಾಲ್ಕು ಹಂತಗಳಲ್ಲಿ ಆನೆಗಳಿಗೆ ಪೌಷ್ಠಿಕವಾದ ಆಹಾರ ನೀಡಿ ಪರಿಪೂರ್ಣವಾಗಿ ಆರೈಕೆ ಮಾಡಲಾಗುತ್ತಿದೆ. ಅಲ್ಲದೆ ಆನೆಗಳ ಆರೋಗ್ಯದ ಬಗ್ಗೆಯೂ ವೈದ್ಯರು ತಪಾಸಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮೈಸೂರಿಗೆ ಹೊರಟ ದಸರಾ ಆನೆಗಳು – ಇಷ್ಟವಾದ ಆಹಾರ ಕೊಟ್ಟ ನಂತ್ರ ಲಾರಿ ಹತ್ತಿದ ಧನಂಜಯ
ಈ ಆನೆಗಳನ್ನು ನಾಳೆ ಸಂಜೆ 4 ಗಂಟೆಗೆ ಮೈಸೂರಿನ ಅರಮನೆಗೆ ಬರ ಮಾಡಿಕೊಳ್ಳಲಾಗುತ್ತದೆ. ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ,ಟಿ. ದೇವೇಗೌಡ ಅರಮನೆಯ ಬಲರಾಮ ದ್ವಾರದಲ್ಲಿ ಸಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಮನೆ ಆವರಣಕ್ಕೆ ಸ್ವಾಗತಿಸಲಿದ್ದಾರೆ ಎಂದು ಆನೆಯ ವೈದ್ಯರಾದ ನಾಗರಾಜ್ ತಿಳಿಸಿದರು.
ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆನೆಗಳನ್ನು ನೋಡಲು ಜನರು ತಂಡೋಪಡವಾಗಿ ಬರುತ್ತಿದ್ದಾರೆ. ಅದರಲ್ಲೂ ಇದೇ ಮೊದಲ ಬಾರಿಗೆ ದಸರೆಗೆ ಬಂದಿರುವ ಧನಂಜಯ ಆನೆ ಎಲ್ಲರ ಆರ್ಕಷಣೆಯಾಗಿದೆ. ಆನೆಗಳ ಜೊತೆ ಸೆಲ್ಫಿ ತೆಗೆಸಿಕೊಂಡು ಜನ ಸಂಭ್ರಮ ಪಡುತ್ತಿದ್ದಾರೆ ಎಂದು ಸ್ಥಳೀಯ ಗೋಪಿ ಹೇಳಿದರು.
ಆನೆಗಳು ನಾಳೆ ಅರಮನೆ ಆವರಣ ಪ್ರವೇಶಿಸಿದ ಮೇಲೆ ಆನೆಗಳಿಗೆ ತಾಲೀಮು ಶುರುವಾಗಲಿದೆ. ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಆನೆಗಳಿಗೆ ದಸರಾ ಮೆರವಣಿಗೆ ಸಾಗುವ ಹಾದಿಯಲ್ಲಿ ತಾಲೀಮು ಮಾಡಿಸಿ ನಗರದ ಪರಿಸರಕ್ಕೆ ಅವುಗಳ ಮನ:ಸ್ಥಿತಿಯನ್ನು ಹೊಂದಿಸಲಾಗುತ್ತದೆ. ಈ ಮೂಲಕ ಮೈಸೂರಲ್ಲಿ ಆನೆ ದರ್ಬಾರ್ ಶುರುವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=ufz9ZpgsZ_o