ಕಾರವಾರ: ಕಳೆದ 2021, ಜೂನ್ ತಿಂಗಳಿನಲ್ಲಿ ಬೆಳಕಿಗೆ ಬಂದ ಪಾಕಿಸ್ತಾನಿ ಮಹಿಳೆ ಭಟ್ಕಳದಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಪಡೆದುಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ಮತದಾರರ ಸೇರ್ಪಡೆ ವಿಷಯದಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ತಾಕೀತು ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಳೆದ ತಿಂಗಳು ನಡೆದ ಮತದಾರರ ನೋಂದಣಿ ಅಭಿಯಾನದಲ್ಲಿ ಹೆಸರು ಸೇರ್ಪಡೆಗೆ ಮುಂದಾಗಿದ್ದ 100ಕ್ಕೂ ಹೆಚ್ಚು ಜನರ ಅರ್ಜಿಯನ್ನು ದಾಖಲೆ ವ್ಯತ್ಯಾಸದ ಕಾರಣವೊಡ್ಡಿ ತಿರಸ್ಕರಿಸಲಾಗಿದೆ. ಮತದಾರರ ನೋಂದಣಿ ಅಭಿಯಾನದಲ್ಲಿ 1,176 ಜನರು ಹೊಸದಾಗಿ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, 114 ಜನರ ಅರ್ಜಿ ತಿರಸ್ಕೃತಗೊಂಡಿದೆ. ಹೆಸರು ಕೈಬಿಡಲು ಸಲ್ಲಿಸಲಾಗಿದ್ದ 1,718 ಅರ್ಜಿಗಳ ಪೈಕಿ 18 ಹಾಗೂ ತಿದ್ದುಪಡಿಗಾಗಿ ಸಲ್ಲಿಸಲಾಗಿದ್ದ 761 ಅರ್ಜಿಗಳ ಪೈಕಿ 112 ಅರ್ಜಿಗಳು ತಿರಸ್ಕೃತಗೊಂಡಿವೆ. ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರವಾಗುತ್ತಿದೆ, ಜನರಿಗೆ ಅಭದ್ರತೆ ಕಾಡುತ್ತಿದೆ: ಅನ್ಸಾರಿ
ಮತದಾರರ ವರ್ಗಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ 187 ಅರ್ಜಿಗಳಲ್ಲಿ 13 ಅರ್ಜಿಗಳನ್ನು ಮಾನ್ಯತೆ ಪಡೆದುಕೊಂಡಿಲ್ಲ. ಹೆಸರು ಸೇರ್ಪಡೆ ಸಂಬಂಧ ತಿರಸ್ಕೃತಗೊಂಡ ಅರ್ಜಿಗಳೊಂದಿಗೆ ಲಗತ್ತಿಸಲಾದ ದಾಖಲೆಗಳಲ್ಲಿ ಹೆಚ್ಚಿನವರ ವಿಳಾಸ ತಾಳೆಯಾಗದೇ ಇರುವುದು, ಹೆಸರು ವ್ಯತ್ಯಾಸ ಸೇರಿದಂತೆ ವಿವಿಧ ಕಾರಣಗಳನ್ನು ಪರಿಗಣಿಸಿ ತಿರಸ್ಕೃತಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದನ್ನೂ ಓದಿ: ಎಸ್ಪಿ ಗೆದ್ದರೆ ಯುಪಿ ಗೂಂಡಾಗಳ ರಾಜ್ಯವಾಗುತ್ತೆ: ಅಮಿತ್ ಶಾ ವಾಗ್ದಾಳಿ
ಭಟ್ಕಳ ತಾಲೂಕು ಅತೀ ಸೂಕ್ಷ್ಮವಾಗಿದ್ದು ಈ ಹಿಂದೆ ಪಾಕಿಸ್ತಾನದಿಂದ ಭಟ್ಕಳ ವ್ಯಕ್ತಿಗಳನ್ನು ಮದುವೆಯಾಗಿ ನಕಲಿ ಪಾಸ್ಪೋರ್ಟ್ ಹಾಗೂ ಪ್ರವಾಸಿ ವಿಸಾ ಪಡೆದು ಇಲ್ಲಿ ಬಂದು ನೆಲೆಸಿದ್ದರು. ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆ, ಕೇಂದ್ರ ಗುಪ್ತದಳ ಇಲಾಖೆ ಮಾಹಿತಿ ಕಲೆಹಾಕುತಿದ್ದು ಪಾಕಿಸ್ತಾನದಿಂದ ಭಾರತಕ್ಕೆ ವಿವಿಧ ಕಾರಣದಿಂದ ವಿಸಾ ಪಡೆದು ಬಂದ 12 ಜನರನ್ನು ಹಾಗೂ ನಕಲಿ ಪಾಸ್ಪೋರ್ಟ್ ಮಾಡಿಸಿಕೊಂಡು ಬಂದು ಭಟ್ಕಳದಲ್ಲಿ ನೆಲಸಿದ್ದವರನ್ನು ಪತ್ತೆ ಮಾಡಿದೆ. ಹೀಗಾಗಿ ಚುನಾವಣಾ ಆಯೋಗ ಸಹ ಸಲ್ಲಿಕೆಯಾದ ದಾಖಲೆಗಳಲ್ಲಿ ವ್ಯತ್ಯಾಸವನ್ನು ಹುಡುಕಿ ಪತ್ತೆಮಾಡುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ