ಚೆನ್ನೈ: ಮಗಳು ಕೆಳಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎನ್ನುವ ಅವಮಾನ ತಾಳಲಾರದೆ ತಂದೆ ಮನೆಯವರನ್ನೆಲ್ಲ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.
ಟೀ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣನ್ ತನ್ನ ಹಿರಿಯ ಮಗಳು ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಮನನೊಂದಿದ್ದರು. ಹೀಗಾಗಿ ಅವರು ತಮ್ಮ ಹೆಂಡತಿ, ಮಕ್ಕಳನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ಅವರ ಮಗಳು ಈಗ ಪತಿಯೊಂದಿಗೆ ವಾಸಿಸುತ್ತಿದ್ದು, ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ ಎಂದು ನಾಗಪಟ್ಟಣಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಜಿ ಜವಾಹರ್ ಹೇಳಿದ್ದಾರೆ. ಇದನ್ನೂ ಓದಿ:ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ
ನಡೆದಿದ್ದೇನು?: ಮಗಳ ಮದುವೆ ವಿಚಾರವಾಗಿ ನೊಂದ ಲಕ್ಷ್ಮಣನ್ ರಾತ್ರಿ ವೇಳೆ ರುಬ್ಬುವ ಕಲ್ಲನ್ನು ತೆಗೆದುಕೊಂಡು ತನ್ನ ಪತ್ನಿ ಭುವನೇಶ್ವರಿ ಮತ್ತು ಇಬ್ಬರು ಕಿರಿಯ ಪುತ್ರಿಯರಾದ ವಿನೋತಿನಿ ಮತ್ತು ಅಕ್ಷಯ ಅವರನ್ನು ಬರ್ಬರವಾಗಿ ಕೊಂದಿದ್ದಾರೆ. ನಂತರ ಲಕ್ಷ್ಮಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಲಕ್ಷ್ಮಣನ್ ಟೀ ಅಂಗಡಿ ತೆರೆಯದ ಕಾರಣ ಅಕ್ಕಪಕ್ಕದ ಮನೆಯವರು ಬೆಳಗ್ಗೆ 7 ಗಂಟೆ ಸುಮಾರಿಗೆ ಅವರ ಮನೆ ಬಳಿ ಬಂದು ನೋಡಿದ್ದಾರೆ. ಆಗ ಲಕ್ಷ್ಮಣನ ಕುಟುಂಬಸ್ಥರು ಸಾವನ್ನಪ್ಪಿರುವುದು ತಿಳಿದಿದೆ.
ಮಾಹಿತಿ ಪಡೆದ ಪೊಲೀಸರು ಶವಗಳನ್ನು ಶವಪರೀಕ್ಷೆಗಾಗಿ ನಾಗಪಟ್ಟಣಂ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ನಾಗಪಟ್ಟಣಂ ಜಿಲ್ಲೆಯ ಎಸ್ಪಿ ಜವಾಹರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ.