ನವದೆಹಲಿ: 100 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಪ್ರಕಾಶ್ ರಾಜ್ಗೆ (Prakash Raj) ಜಾರಿ ನಿರ್ದೇಶನಾಲಯ (ED) ಸಮನ್ಸ್ ನೀಡಿದೆ. ಆಭರಣ ವ್ಯಾಪಾರಿಯೊಬ್ಬರಿಗೆ ಲಿಂಕ್ ಇರುವ 100 ಕೋಟಿ ರೂ. ವಂಚನೆ ಪ್ರಕರಣದ ಕುರಿತು ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಸಮನ್ಸ್ ಯಾಕೆ..?; ನಟ ಪ್ರಕಾಶ್ ರಾಜ್ (Prakash Raj) ಅವರು ಕೆಲವು ಕಾಲ ತಿರುಚ್ಚಿ ಮೂಲದ ಪ್ರಣವ್ ಜ್ಯುವೆಲ್ಲರ್ಸ್ನ (Pranav Jewellers) ರಾಯಭಾರಿಯಾಗಿದ್ದರು. ಇದು ಚೆನ್ನೈ (Chennai) ಸೇರಿದಂತೆ ತಮಿಳುನಾಡು (Tamilnadu) ಮತ್ತು ಪುದುಚೇರಿಯಲ್ಲಿ ಹಲವು ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿದೆ. ಹೂಡಿಕೆದಾರರಿಗೆ 100 ಕೋಟಿ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಈ ಸರಣಿ ಶಾಖೆಗಳ ಮೇಲೆ ಇಡಿ ಈ ಹಿಂದೆ ದಾಳಿ ನಡೆಸಿತ್ತು. ರಾಯಭಾರಿಯಾಗಿದ್ದರೂ ನಟ ಹಗರಣ ಬಗ್ಗೆ ಇದುವರೆಗೂ ತುಟಿ ಬಿಚ್ಚಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ.
ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಪ್ರಣವ್ ಜ್ಯುವೆಲರ್ಸ್ ನಡೆಸುತ್ತಿದ್ದ ಮಳಿಗೆಗಳನ್ನು ಅಕ್ಟೋಬರ್ನಲ್ಲಿ ಮುಚ್ಚಲಾಯಿತು. ಜ್ಯುವೆಲರ್ಸ್ ಮೇಲೆ ಸಾಕಷ್ಟು ದೂರುಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಾಲೀಕ ಮದನ್ ವಿರುದ್ಧ ತಮಿಳುನಾಡಿನ ತಿರುಚ್ಚಿಯ ಆರ್ಥಿಕ ಅಪರಾಧಗಳ ವಿಭಾಗ ಪ್ರಕರಣ ದಾಖಲಿಸಿತ್ತು. ಬಳಿಕ ಮಾಲೀಕ ಹಾಗೂ ಅವರ ಪತ್ನಿ ವಿರುದ್ಧ ಲುಕೌಟ್ ನೋಟಿಸ್ ಕೂಡ ಜಾರಿ ಮಾಡಿದೆ.
ಈ ಸಂಬಂಧ ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಇಡಿ ಅಧಿಕಾರಿಗಳು, ಈ ಆಭರಣ ಮಳಿಗೆ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂದು ನಂಬಿಸಲಾಗುತ್ತಿತ್ತು. ಈ ಮೂಲಕ ಆಭರಣ ಮಳಿಗೆಯು ಹೂಡಿಕೆದಾರರ ಬಳಿಯಿಂದ 100 ಕೋಟಿ ರೂ. ಸಂಗ್ರಹಿಸಿದೆ. ಆದರೆ ಯಾವುದೇ ಲಾಭವನ್ನು ನೀಡಿಲ್ಲ ಮತ್ತು ಹೂಡಿಕೆ ಮಾಡಿದ ಮೊತ್ತವನ್ನು ಸಹ ಯಾರಿಗೂ ಹಿಂದಿರುಗಿಸಿಲ್ಲ ಎಂದು ತಿಳಿಸಿದರು.