ಬೆಂಗಳೂರು: ದಸರಾ (Dasara) ಮತ್ತು ಆಯುಧಪೂಜೆ (Ayudha Puja) ಹಿನ್ನೆಲೆ ನಗರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಹಿನ್ನೆಲೆ ನಾಳೆ ನಾಡಿದ್ದು ಇನ್ನಷ್ಟು ದರ ಏರಿಕೆ ಸಾಧ್ಯತೆ ಇದ್ದು, ಇಂದೇ ಜನ ಖರೀದಿಗೆ ಮುಂದಾಗಿದ್ದಾರೆ.
ಹಬ್ಬದ ದಿನಗಳು ಹತ್ತಿರ ಬಂದರೆ ಸಾಕು ಜನಸಾಮಾನ್ಯರ ಜೇಬಿಗೆ ಹೊರೆ ಬೀಳುವುದು ಸಾಮಾನ್ಯ. ಕಾರಣ ಅಗತ್ಯ ವಸ್ತುಗಳ ಖರೀದಿ ಹೆಚ್ಚಾಗುವ ಕಾರಣ ಇತರೆ ದಿನಗಳಿಗೆ ಹೋಲಿಕೆ ಮಾಡಿದರೆ ಹಬ್ಬದ ದಿನಗಳಲ್ಲಿ ಬೆಲೆ ಹೆಚ್ಚಾಗುತ್ತಲೇ ಇರುತ್ತದೆ. ಅದರಂತೆ ಈ ಬಾರಿಯ ಆಯುಧಪೂಜೆ ದಸರಾಗೂ ದರ ಏರಿಕೆಯಾಗಿದ್ದು, ಹಬ್ಬಕ್ಕೆ ಎರಡು ದಿನ ಮುನ್ನವೆ ಖರೀದಿ ಕೂಡ ಜೋರಾಗಿದೆ. ಇದನ್ನೂ ಓದಿ : ಡಿಕೆಶಿ ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು – ಡಿಕೆಶಿ ಕಣ್ಣೀರಿಗೆ ಸಿ.ಟಿ.ರವಿ ವ್ಯಂಗ್ಯ
ಈ ಬಾರಿ ಆಯುಧಪೂಜೆಗೆ ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಸಾಮಾನ್ಯವಾಗಿ ಆಯುಧಪೂಜೆ ಸಂದರ್ಭದಲ್ಲಿ ವಾಹನಗಳು, ಯಂತ್ರಗಳಿಗೆ ಹೂವಿನ ಅಲಂಕಾರದ ಜೊತೆಗೆ, ಪೂಜೆ ಪುನಾಸ್ಕಾರಗಳು ಜೋರಾಗಿಯೇ ಮಾಡುವುದರಿಂದ ಹೂ ಸೇರಿದಂತೆ ಕೆಲ ಅಗತ್ಯ ವಸ್ತುಗಳ ದರ ದುಪ್ಪಟ್ಟಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಹೂವಿನ ದರ ಡಬಲ್ ಏರಿಕೆಯಾಗಿದೆ. ಆದರೆ ವಿಶೇಷ ಅಂದರೆ ಹಣ್ಣು ಮತ್ತು ತರಕಾರಿ ದರ ತಟಸ್ಥವಾಗಿದ್ದು, ಹೂವಿನ ದರ ಕೈಸುಡುತ್ತಿದೆ. ಇನ್ನೂ ನಾಳೆ, ನಾಡಿದ್ದು ಇನ್ನಷ್ಟು ದರ ಏರಿಕೆಯಾಗುವ ಸಾಧ್ಯತೆ ಇದ್ದು, ಹೂ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇತ್ತ ಗ್ರಾಹಕರು ಕೂಡ ಹೂವಿನ ಬೆಲೆ ಜಾಸ್ತಿ ಆಗುವ ಸಾಧ್ಯತೆ ಹಿನ್ನೆಲೆ ಇಂದೇ ವ್ಯಾಪಾರಕ್ಕೆ ಮುಂದಾಗಿದ್ದಾರೆ.
ಹೂವಿನ ಬೆಲೆ ಕೆಜಿಗೆ ಎಷ್ಟು?
ಮಲ್ಲಿಗೆ ಹೂ – 1000 ಸಾವಿರ ರೂ.
ಸೇವಂತಿಗೆ – 300-500 ರೂ.
ಚೆಂಡು ಹೂ – 150 ರೂ .
ಕನಕಾಂಬರ – 3 ಸಾವಿರ
ಸುಗಂಧರಾಜ – 400 ರೂ.
ಕಾಕಡ – 700-800 ರೂ.
ಕೇವಲ ಹೂ ಮಾತ್ರ ಅಲ್ಲ. ಈ ಹಬ್ಬಕ್ಕೆ ಬೇಕಾದ ಮತ್ತೊಂದು ಅಗತ್ಯ ವಸ್ತು ಅಂದರೆ ಕುಂಬಳಕಾಯಿ (Pumpkin) ಹಾಗೂ ಬಾಳೆ ಕಂಬ. ಇವುಗಳ ಬೆಲೆ ಕೂಡ ಡಬಲ್ ಆಗಿದೆ. ತಮಿಳುನಾಡು, ಆಂಧ್ರದಿಂದ ನಗರಕ್ಕೆ ಆಗಮಿಸಿರುವ ಕುಂಬಳಕಾಯಿ ಕೆ.ಜಿಗೆ 35 ರಿಂದ 40 ರೂ. ಗೆ ಏರಿಕೆ ಆಗಿದೆ. ಕಳೆದ ವಾರ 15 ರೂ. ಇದ್ದ ಕುಂಬಳಕಾಯಿ ದರ ಈ ವಾರ ಎರಡು ಪಟ್ಟು ಏರಿಕೆಯಾಗಿದೆ. ಬಾಳೆ ಕಂಬ ಸಹ ಜೊತೆಗೆ 150 ರೂ. ಆಗಿದೆ. ಹಲವೆಡೆ ಮಳೆ ಮತ್ತು ಬೆಳೆನಷ್ಟ ಹಿನ್ನೆಲೆ ಈ ಬಾರಿ ಬೇರೆ ಕಡೆಯಿಂದ ಲೋಡ್ ಬಾರದ ಹಿನ್ನೆಲೆ ಸದ್ಯ ಬೆಲೆ ಏರಿಕೆಯಾಗಿದೆ ಎನ್ನಲಾಗುತ್ತಿದೆ.
ಒಟ್ಟಾರೆ ನಾಳೆ ನಾಡಿದ್ದು ಇನ್ನಷ್ಟು ದರ ಹೆಚ್ಚಾಗುವ ಸಾಧ್ಯತೆ ಇದೆ. ಇಂದೇ ನಿಮ್ಮ ಖರೀದಿ ಮಾಡಿ ಮುಗಿಸಿದರೆ ಸ್ವಲ್ಪ ಹಣ ಉಳಿತಾಯ ಆದರೂ ಆಗಬಹುದು. ಇದನ್ನೂ ಓದಿ: ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು 2 ಕೋಟಿ ರೂ. ಬಿಡುಗಡೆ: ಪ್ರಭು ಚವ್ಹಾಣ್