– ಇತ್ತ ವಿಜಯಪುರದಲ್ಲಿ ಮಂಜು ಮುಸುಕಿದ ವಾತಾವರಣ
ರಾಯಚೂರು/ ವಿಜಯಪುರ: ರಾಯಚೂರಿನಲ್ಲಿ ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ ಬರುತ್ತಿದ್ದರೆ, ಇತ್ತ ಬಿಸಿಲ ನಾಡು ವಿಜಯಪುರದಲ್ಲಿ ಬೇಸಿಗೆಯಲ್ಲೂ ಚಳಿಯ ವಾತಾವರಣ ಇದೆ.
ರಾಯಚೂರಿನಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಜಿಟಿ ಜಿಟಿ ಮಳೆ ಆಗುತ್ತಿದೆ. ಜೋರು ಮಳೆ ಬರುವ ಸಾಧ್ಯತೆಗಳಿದ್ದು, ಹತ್ತಿ, ಮೆಣಸಿನಕಾಯಿ ಬೆಳೆದ ರೈತರು ಕಟಾವಿಗೆ ಬಂದಿರುವ ಫಸಲು ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತ ವಿಜಯಪುರ ಹವಾಮಾನದಲ್ಲಿ ಭಾರೀ ಬದಲಾವಣೆ ಆಗಿದೆ. ಬಿಸಿಲ ನಾಡಲ್ಲಿ ಬೇಸಿಗೆಯಲ್ಲೂ ಚಳಿಯ ವಾತಾವರಣವಿದ್ದು, ಜಿಲ್ಲೆಯ ಕೆಲವು ಕಡೆ ಮಂಜು ಮುಸುಕಿದೆ. ವಿಜಯಪುರ ಜಿಲ್ಲೆಯ ಸಾರವಾಡ ಬಳಿ ದಟ್ಟವಾದ ಮಂಜು ಆವರಿಸಿದೆ.
ದಟ್ಟವಾದ ಮಂಜು ಇರುವ ಕಾರಣ ಚಾಲಕರು ಹೆಡ್ಲೈಟ್ ಬಳಸಿ ವಾಹನ ಚಲಾಯಿಸುತ್ತಿದ್ದಾರೆ. ಇದೇ ವೇಳೆ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆತಂಕದಲ್ಲಿದ್ದಾರೆ.