ರಾಮನಗರ: ತಿಂಗಳು ಕಳೆದರೂ ಕುಡಿಯುವ ನೀರು ಪೂರೈಸದ ಕಾವೇರಿ ನೀರು ಸರಬರಾಜು ಮಂಡಳಿ ಅಧಿಕಾರಿಗಳ ವಿರುದ್ಧ ಚನ್ನಪಟ್ಟಣದಲ್ಲಿ ಸ್ಥಳೀಯರು ಹಾಗೂ ನೀರೆಯರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.
ಚನ್ನಪಟ್ಟಣದ ಕಾವೇರಿ ನೀರಾವರಿ ನಿಗಮ ಒಂದು ತಿಂಗಳು ಕಳೆದರೂ ನೀರು ಬಿಡದೆ, ದುರಸ್ಥಿ ನೆಪದಲ್ಲಿ ತೆರದ ಗುಂಡಿಯನ್ನು ಮುಚ್ಚದೆ ಹಾಗೇ ಬಿಟ್ಟಿರುವ ಅಧಿಕಾರಿಗಳ ಬೇಜಾವಾಬ್ದಾರಿಯನ್ನು ರೈತರು, ಸಾರ್ವಜನಿಕರು ಖಂಡಿಸಿದ್ದಾರೆ. ಅಲ್ಲದೆ ಇಂದು ಕರ್ನಾಟಕ ದಂಡಿನ ಮಾರಮ್ಮ ರಾಜ್ಯ ರೈತ ಸಂಘ, ನಗರದ ಪಾರ್ವತಿ ಚಿತ್ರಮಂದಿರ ರಸ್ತೆಯ ನಿವಾಸಿಗಳು ಕಾವೇರಿ ನೀರಾವರಿ ನಿಗಮದ ಕಚೇರಿಯ ಗೇಟ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪಾರ್ವತಿ ಚಿತ್ರಮಂದಿರದ ರಸ್ತೆಗೆ ಹೊಂದಿಕೊಂಡಿರುವ ಬೋರ್ ದುರಸ್ಥಿಗೆ ಬಂದು ಒಂದು ತಿಂಗಳು ಕಳೆಯುತ್ತಿದೆ. ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿ, ಬೋರ್ ದುರಸ್ಥಿಗೆ ಮುಚ್ಚಿದ ಸಿಮೆಂಟ್ ಚಪ್ಪಡಿಗಳನ್ನು ತೆರೆದು ಬಿಟ್ಟ ಕಾಣೆಯಾಗಿದ್ದಾರೆ. ಈ ರೀತಿಯ ಅವ್ಯವಸ್ಥೆಯಿಂದ ಕುಡಿಯುವ ನೀರಿಗೆ ಭಾರೀ ಸಮಸ್ಯೆ ಉಂಟಾಗಿ, ಟ್ರಾಕ್ಟರ್ನಲ್ಲಿ ನೀರು ತುಂಬಿಸಿಕೊಂಡು ಹಾಗೂ ಪಕ್ಕದ ರಸ್ತೆಯಲ್ಲಿ ನೀರು ತೆಗೆದುಕೊಂಡು ಬರುವ ದುಸ್ಥಿತಿಯುಂಟಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಜನರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಖಾಲಿ ಬಿಂದಿಗೆಗಳನ್ನು ಮುಂದಿಟ್ಟುಕೊಂಡು ನಿಗಮದ ಅಧಿಕಾರಿಗಳಿಗೆ ಪ್ರತಿಭಟನಕಾರರು ಹಿಡಿ ಶಾಪ ಹಾಕಿದರು. ಒಂದು ತಾಸು ಕಳೆದರೂ ಪ್ರತಿಭಟನಾ ಸ್ಥಳಕ್ಕೆ ಯಾವ ಅಧಿಕಾರಿಗಳು ಬಾರದ ಕಾರಣ ಕಚೇರಿಯ ಮುಂಬದಿಯ ಗೇಟ್ ಬಂದ್ ಮಾಡಿ, ಪ್ರತಿಭಟನಾಕಾರರು ಗೇಟ್ ಮುಂದೆ ಕುಳಿತು ಅಧಿಕಾರಿಗಳ ದುರ್ವರ್ತನೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ನಮಗೆ ಒಂದು ದಿನದ ಕಾಲವಕಾಶ ನೀಡಿ ಬೋರ್ ರಿಪೇರಿ ಮಾಡಿಸಿ, ಕುಡಿಯುವ ನೀರು ಸರಬರಾಜು ಮಾಡುತ್ತೇವೆ ಎಂದು ಮನವಿ ಮಾಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.