ಹಾಸನ: ಇಡೀ ದೇಶದಲ್ಲಿ ಕೊರೊನ ಭೀತಿ ಶುರುವಾಗಿದರೆ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಲವಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಸತ್ತ ಇಲಿ, ಕೀಟಗಳು ಬರುತ್ತಿದ್ದು, ಸಾಂಕ್ರಾಮಿಕ ರೋಗದ ಆತಂಕ ಎದುರಾಗಿದೆ.
ಕೆಲವಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಓವರ್ ಟ್ಯಾಂಕ್ನಲ್ಲಿ ಗಲೀಜು ತುಂಬಿಕೊಂಡಿದೆ. ಜೊತೆಗೆ ಇಲಿ, ಕೀಟಗಳು ಸತ್ತು ಗಬ್ಬು ನಾರುತ್ತಿದೆ. ಕಳೆದೊಂದು ವಾರದಿಂದ ಇದೇ ನೀರು ಕುಡಿದು ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ಹೊರಹಾಕುತ್ತಿದ್ದಾರೆ.
ಈ ಬಗ್ಗೆ ಗಮನ ಹರಿಸಬೇಕಾದ ಗ್ರಾಮ ಪಂಚಾಯ್ತಿ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಹಾಯಕತೆ ಹೊರ ಹಾಕುತ್ತಿದ್ದಾರೆ. ಜಗತ್ತಿನಾದ್ಯಂತ ಜನ ಕೊರೊನಾ ಸೋಂಕಿನಿಂದ ಸಾಯುತ್ತಿದ್ದರೆ, ನಾವು ಶುದ್ಧವಾದ ಕುಡಿಯುವ ನೀರಿಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ನೋವು ಹೊರಹಾಕುತ್ತಿದ್ದಾರೆ.