ನವದೆಹಲಿ: ಕಾಂಗ್ರೆಸ್ (Congress) ಬಲವರ್ಧನೆಗೆ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ದೆಹಲಿ ಪ್ರವೇಶಿಸಿದೆ. ರಾಹುಲ್ ಗಾಂಧಿ (RahulGandhi) ಅವರ ನೇತೃತ್ವದಲ್ಲಿ ನಡೆಯುತ್ತಿರೋ ಈ ಯಾತ್ರೆ ದ್ವೇಷ-ಹಿಂಸೆಗಳಿಲ್ಲದ ಭಾರತದ ಪ್ರತಿರೂಪ ಎಂದು ಜನರು ಹೇಳುತ್ತಿದ್ದಾರೆ.
ವಿಶೇಷವೆಂದರೆ ಈ ಯಾತ್ರೆಯಲ್ಲಿ ಸಾರ್ವಜನಿಕರನ್ನು ಮಾತ್ರವಲ್ಲದೇ ಪ್ರಾಣಿಗಳನ್ನು ಸ್ವಾಗತಿಸಲಾಗಿದೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸ್ಥಳೀಯ, ವಿದೇಶಿ ಎನ್ಜಿಒಗಳಲ್ಲಿ ಮಹಿಳೆ ಉದ್ಯೋಗಿಗಳಿಗೆ ಅವಕಾಶ ಕೊಡ್ಬೇಡಿ – ತಾಲಿಬಾನ್ ಆದೇಶ
ದೆಹಲಿಯ ಕೆಂಪು ಕೋಟೆಯಲ್ಲಿ `ಭಾರತ್ ಜೋಡೋ ಯಾತ್ರೆ’ಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ನಾಯಿಗಳು, ಹಂದಿಗಳು, ಹಸುಗಳೂ ಸೇರಿದಂತೆ ಎಲ್ಲ ಪ್ರಾಣಿಗಳೂ ಬಂದಿವೆ. ಆದರೆ ಯಾವುದಕ್ಕೂ ಕೆಡಕುಂಟು ಮಾಡಿಲ್ಲ. ಎಲ್ಲ ಜನರು ನನ್ನೊಟ್ಟಿಗೆ ಬಂದಿದ್ದಾರೆ. ನಾನು 2,800 ಕಿಮೀ ನಡೆದಿದ್ದೇನೆ. ಆದ್ರೆ ಅಲ್ಲೆಲ್ಲೂ ಯಾವುದೇ ದ್ವೇಷವನ್ನು ನೋಡಲಿಲ್ಲ. ಆದರೆ ಟಿವಿ ಆನ್ ಮಾಡಿದಾಗ, ನಾನು ಹಿಂಸೆಯನ್ನು ನೋಡುತ್ತಿದ್ದೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ (BJP) ನನ್ನ ಇಮೇಜ್ ಡ್ಯಾಮೇಜ್ ಮಾಡಲು ಸಾವಿರಾರು ಕೋಟಿ ಖರ್ಚು ಮಾಡಿದೆ. ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ದಿನದ 24 ಗಂಟೆಯೂ ಹಿಂದೂ-ಮುಸ್ಲಿಮರ (Hindu Muslims) ನಡುವೆ ದ್ವೇಷವನ್ನು ಹರಡುತ್ತಿದೆ. ಭಿನ್ನಾಭಿಪ್ರಾಯಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡು ದ್ವೇಷವನ್ನು ಹರಡುತ್ತಿದೆ. ಇದು ನರೇಂದ್ರ ಮೋದಿಯವರ (Narendra Modi) ಸರ್ಕಾರವಲ್ಲ. ಇದು ಅಂಬಾನಿ ಮತ್ತು ಅದಾನಿ ಸರ್ಕಾರ. ಇಂದು ಪದವಿ ಪಡೆದ ಯುವಕರು ಪಕೋಡಾಗಳನ್ನು ಮಾರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಲು ನಿರಾಕರಿಸಿದ ಕತಾರ್ ಏರ್ವೇಸ್ಗೆ 3 ಲಕ್ಷ ದಂಡ
ಸೆ.7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಂಚರಿಸಿ ಈಗ ಹರಿಯಾಣ ಬಳಿಕ ಮತ್ತೆ ದೆಹಲಿ ಪ್ರವೇಶಿಸಿದೆ. ಜ.3 ರಿಂದ ಮತ್ತೆ ಯಾತ್ರೆ ಆರಂಭಿಸಿ ಅಂತಿಮವಾಗಿ ಕಾಶ್ಮೀರದಲ್ಲಿ ಯಾತ್ರೆ ಸಮಾಪ್ತಿಗೊಳ್ಳಲಿದೆ.