ಬೆಂಗಳೂರು: ನನ್ನ ವಿರುದ್ಧ ಕೇಸ್ ಹಾಕಿದಾಗ ನನ್ನ ವಿರುದ್ಧ ಯಾರಾದರೂ ಕಾಗದ ಬರೆದಿದ್ದಾರಾ? ಅಥವಾ ಯಾವುದಾದರೂ ತನಿಖೆ ಆಗಿದೆಯೇ, ಆದರೂ ಹೇಗೆ ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರ ವಿರುದ್ಧ ಗುತ್ತಿಗೆದಾರರು ಮಾಡಿದ ಕಮಿಷನ್ ಆರೋಪ ಮಾಡಿ ಕಾಗದ ಬರೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿ, ನನ್ನ ವಿರುದ್ಧ ಯಾವುದೇ ದಾಖಲೆಯಿಲ್ಲದೇ ನನ್ನನ್ನು ಜೈಲಿಗೆ ಕಳಿಸಿದ್ದಾರೆ. ನನ್ನ ಮೇಲೆ ಯಾವ ದಾಖಲೆ ಇದೆ. ನಾನು ಏನು ಕೊಲೆ ಮಾಡಿದ್ದೀನಾ? ರೇಪ್ ಮಾಡಿದ್ದೀನಾ? ಲಂಚದ ಕೇಸ್ ಏನಾದರೂ ಇತ್ತಾ, ಆದರೂ ನನ್ನನ್ನು ಒಳಗೆ ಹಾಕಲಿಲ್ಲವೇ. ಆ ಸಂದರ್ಭದಲ್ಲಿ ನನ್ನ ವಿರುದ್ಧ ಯಾವುದಾದರೂ ಕಮಿಷನ್ ವರದಿ ಕೊಟ್ಟಿತ್ತಾ? ನನ್ನ ವಿರುದ್ಧ ಯಾವುದಾದರೂ ಪತ್ರ ಬರೆದಿದ್ದಾರಾ ಎಂದು ವಾಗ್ದಾಳಿ ನಡೆಸಿದರು.
ಈಶ್ವರಪ್ಪನವರ ವಿರುದ್ಧ ಕೇಳಿಬಂದ ಕಮಿಷನ್ ಆರೋಪಕ್ಕೆ ಬಿಜೆಪಿ ಏನು ಕ್ರಮಗೊಳ್ಳುತ್ತಾರೆ ಎಂದು ನೋಡೋಣ. 40% ಕಮಿಷನ್ ವಿಚಾರದ ಬಗ್ಗೆ ಈಶ್ವರಪ್ಪನವರ ವಿರುದ್ಧದ ಆರೋಪದ ಬಗ್ಗೆ ಶಾಸಕಾಂಗ ಪಕ್ಷದ ನಾಯಕರು ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಏನು ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ. ಆನಂತರದಲ್ಲಿ ನಾವು ಮುಂದಿನ ಕ್ರಮ ಕೈಗೊಳ್ಳುವುದರ ಕುರಿತು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಟಿಪ್ಪು ಬಗ್ಗೆ ಶೃಂಗೇರಿ ಮಠಕ್ಕೆ ಹೋಗಿ ಕೇಳಲಿ ಕೊಲ್ಲೂರಿನಲ್ಲಿ ತಿಳಿದುಕೊಳ್ಳಲಿ: ಡಿಕೆಶಿ
ಈಶ್ವರಪ್ಪನವರ ಮೇಲೆ ಆರೋಪ ಮಾಡಿರುವುದು ಷಡ್ಯಂತ್ರ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಸರ್ಕಾರದ ವಿರುದ್ಧ ಈಶ್ವರಪ್ಪನವರೇ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಆಗ ಅವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದಾರೆ. ಯತ್ನಾಳ್ ಹಾಗೂ ವಿಶ್ವಾಥ್ ಕೂಡಾ ಸರ್ಕಾರದ ವಿರುದ್ಧ ಮಾತನಾಡಿದ್ದರು, ಅವರಿಗೆ ಬುದ್ಧಿ ಇಲ್ಲವಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾರವಾರ ಬಂದರು ವಿಸ್ತರಣೆ ಕಾಮಗಾರಿ ಮುಂದುವರಿಸಬೇಡಿ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ