ಚಿಕ್ಕಬಳ್ಳಾಪುರ: ಡೈವೋರ್ಸ್ ನೀಡಲು ನಿರ್ಧರಿಸಿರುವ ಪತ್ನಿಯನ್ನು ಹೆದರಿಸಲು ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ನಡೆದಿದೆ.
ಮೂಲತಃ ಬೆಂಗಳೂರಿನ ಲೊಟ್ಟಗೊಲ್ಲಹಳ್ಳಿ ನಿವಾಸಿ ರಾಜು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಟಿ.ದಾಸರಹಳ್ಳಿ ನಿವಾಸಿಯಾಗಿರುವ ಮೋನಿಷಾರನ್ನು ಪ್ರೀತಿಸಿದ್ದ ರಾಜು 2014 ರಲ್ಲಿ ಗೋರವನಹಳ್ಳಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ತಮ್ಮ ವಿವಾಹವನ್ನು ರಿಜಿಸ್ಟರ್ ಮಾಡಿಸಿದ್ದರು.
ಕೆಲ ದಿನಗಳಿಂದ ಪತಿ ರಾಜು ಹಾಗೂ ಪತ್ನಿ ಮೋನಿಷಾ ನಡುವೆ ಹೊಂದಾಣಿಕೆ ಇಲ್ಲದೇ ಮೋನಿಷಾ ಗಂಡನನ್ನು ತೊರೆದು ತವರು ಮನೆ ಸೇರಿದ್ದರು. ಅಲ್ಲದೇ ಪತಿ ರಾಜು ಜೊತೆ ಮತ್ತೆ ಜೀವನ ನಡೆಸಲು ಇಷ್ಟವಿಲ್ಲದ ಎಂದು ಹೇಳಿ ಮೋನಿಷಾ ವಿಚ್ಛೇದನ ನೀಡಲು ನಿರ್ಧರಿಸಿದ್ದರು.
ಬುಧವಾರ ಕೆಲಸದ ನಿಮಿತ್ತ ಸ್ನೇಹಿತನ ಜೊತೆ ರಾಜು ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಈ ವೇಳೆ ತನ್ನ ಪತ್ನಿ ಡೈವೋರ್ಸ್ ನೀಡಲು ಮುಂದಾಗುತ್ತಿರುವ ವಿಚಾರವನ್ನು ಸ್ನೇಹಿತನಿಗೆ ತಿಳಿಸಿದ್ದಾರೆ. ಈ ಹಿಂದೆಯೂ ಒಮ್ಮೆ ಮೋನಿಷಾ ಮನೆ ಬಿಟ್ಟು ಹೋಗಿದ್ದಾಗ ಆಕೆಯನ್ನು ಬೆದರಿಸಲು ಆತ್ಮಹತ್ಯೆಗೆ ಯತ್ನಿಸಿದ್ದ ಕುರಿತು ತಿಳಿಸಿದ್ದಾರೆ. ಮತ್ತೆ ಇದೇ ಉಪಾಯವನ್ನು ಅನುಸರಿಸಿರುವ ರಾಜು ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ಸ್ನೇಹಿತ ಕಾರು ನಿಲ್ಲಿಸಿ ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಾರಿನಲ್ಲೇ ಇಲಿ ಪಾಷಾಣ ಹಾಗೂ ಡೆಟಾಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಊಟ ಮುಗಿಸಿ ಬಂದ ರಾಜು ಸ್ನೇಹಿತ ಕಾರಿನಲ್ಲಿ ಡೆಟಾಲ್ ವಾಸನೆ ಬರುವುದನ್ನು ಕಂಡು ಆತ್ಮಹತ್ಯೆ ಯತ್ನಿಸಿದ ರಾಜುರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.