ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಬೇರು ಮಟ್ಟದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದ್ದು, ಮೇಲ್ಮಟ್ಟದಲ್ಲಿ ಪಕ್ಷದಲ್ಲಿ ಉತ್ತಮ ನಿರ್ಧಾರಗಳನ್ನ ತೆಗೆದುಕೊಳ್ಳಬೇಕೆಂದು ಕಾರ್ಯಕರ್ತರು ಬಯಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪಕ್ಷದ ನಾಯಕರು ಸ್ವಪ್ರತಿಷ್ಠೆ ಬಿಟ್ಟು ಪಕ್ಷ ಕಟ್ಟುವಲ್ಲಿ ಒಟ್ಟಿಗೆ ಹೋಗಬೇಕು. ಆಗ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದ ಮಾದರಿಯಲ್ಲೇ ಗೆಲುವು ಸಾಧಿಸಬಹುದು. ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ದೆಹಲಿ ಮತದಾರನ ತೀರ್ಪನ್ನ ನಾವು ಒಪ್ಪಿಕೊಳ್ಳಬೇಕು. ವೋಟ್ ಶೇರ್ ನಲ್ಲಿ ನಮಗೆ ಹಿನ್ನಡೆ ಆಗಿದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಗೆ ಇದ್ದ ವೋಟ್ ಶೇರ್ ಗಿಂತ ಈಗ ಕಡಿಮೆ ಆಗಿದೆ. ಪಕ್ಷಕ್ಕೆ ಚೈತನ್ಯ ತುಂಬುವಂತ ತೀರ್ಮಾನಗಳಾಗಬೇಕಿದೆ ಎಂದರು.
ಅಧಿಕಾರಕ್ಕಾಗಿ ಕಾಂಗ್ರೆಸ್ ಬೇಕು ಅನ್ನುವವರನ್ನ ಸ್ವಲ್ಪ ದೂರ ಇಡಬೇಕು. ಪಕ್ಷಕ್ಕಾಗಿ ತ್ಯಾಗ ಮಾಡುವುವರಿಗೆ ಹೆಚ್ಚಿನ ಅವಕಾಶ ಕೊಡಬೇಕು. ಈ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರ ಜೊತೆ ನಾನು ಚರ್ಚೆ ಮಾಡುತ್ತೇನೆ. ರಾಜ್ಯದಲ್ಲಿಯ ಹಿರಿಯ ನಾಯಕರು ತಮ್ಮ ಸ್ವಪ್ರತಿಷ್ಠಿತೆ ಬಿಟ್ಟು ಪಕ್ಷ ಸಂಘಟನೆಗೆ ಮುಂದಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.